ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಅನ್ನೋ ಕುತೂಹಲ ಮುಂದುವರೆದಿದೆ. ಯಾಕಂದರೆ, 2023ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಕಾಂಗ್ರೆಸ್ ಟಿಕೆಟ್ ಗೆ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನವಾಗಿತ್ತು. ಹೀಗಾಗಿ ಸಿದ್ದರಾಮಯ್ಯನವರು ಎಲ್ಲಿಂದ ಸ್ಪರ್ಧಿಸುತ್ತಾರೆ ಅನ್ನೋದು ಇಂದು ತಿಳಿಯಲಿದೆ ಎಂದುಕೊಂಡವರಿಗೆ ನಿರಾಸೆಯಾಗಿದೆ.
ಸಿದ್ದರಾಮಯ್ಯನವರು ಇಂದು ತಮ್ಮ ಆಪ್ತರಾದ ಪ್ರಭಾಕರ್, ವೆಂಕಟೇಶ್ ಎಂಬುವರ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇದರಲ್ಲಿ ಯಾವ ಕ್ಷೇತ್ರ ಅನ್ನೋದು ನಮೋದಿಸಿಲ್ಲ. ಹೀಗಾಗಿ ಚುನಾವಣೆವರೆಗೂ ಕಾಯಬೇಕಿದೆ.
2018ರಲ್ಲಿ ಬಾಗಲಕೋಟೆಯ ಬಾದಾಮಿ, ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬಿಜೆಪಿಯ ಶ್ರೀರಾಮುಲು ವಿರುದ್ಧ ಬಾದಾಮಿಯಲ್ಲಿ ಜಯ ಸಾಧಿಸಿದರೆ, ಜೆಡಿಎಸ್ ನ ಜಿ.ಟಿ ದೇವೇಗೌಡ ಎದುರು ಚಾಮುಂಡೇಶ್ವರಿಯಲ್ಲಿ ಸೋತರು. ವರುಣಾ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಟ್ಟ ಕಾರಣ ಎರಡು ಕಡೆ ಸ್ಪರ್ಧಿಸಿದ್ದರು. ಈ ಬಾರಿ ಹಲವು ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ಅವರಿಗೆ ಒತ್ತಾಯಿಸಲಾಗುತ್ತಿದ್ದು, ಕೋಲಾರ ಕ್ಷೇತ್ರದತ್ತ ಮುಖ ಮಾಡುವ ಸಾಧ್ಯತೆ ಹೆಚ್ಚಿದೆ. ಇತ್ತೀಚೆಗೆ ಇಲ್ಲಿಗೆ ಭೇಟಿ ಕೊಟ್ಟು ಚರ್ಚಿಸಿ ಬಂದಿದ್ದಾರೆ.