ಟಿಕೆಟ್ ಭರವಸೆ ನೀಡದಂತೆ ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಎಚ್ಚರಿಕೆ!

193

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: 2023ರ ವಿಧಾನಸಭಾ ಚುನಾವಣೆ ಸಂಬಂಧ ಟಿಕೆಟ್ ಗಾಗಿ ಬಿಜೆಪಿಯಲ್ಲಿ ಭರ್ಜರಿ ಪೈಪೋಟಿ ಇದೆ. ಹೀಗಾಗಿ ರಾಜ್ಯ ನಾಯಕರ ಮೂಲಕ ಹೈಕಮಾಂಡ್ ಬಳಿ ತಮ್ಮ ಶಿಫಾರಸು ಮಾಡಲು ಹಲವರು ಕಸರತ್ತು ನಡೆಸಿದ್ದಾರೆ. ಇದಕ್ಕೆ ಬಿಜೆಪಿ ಹೈಕಮಾಂಡ್ ಖಡಕ್ ಎಚ್ಚರಿಕೆ ಕೊಟ್ಟಿದೆ.

ಸ್ವತಃ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಯಾವುದೇ ಹಿರಿಯ ನಾಯಕರು ಯಾರಿಗೂ ಟಿಕೆಟ್ ಕೊಡಿಸುವ ಭರವಸೆ ನೀಡಬಾರದು ಎಂದು ಸೂಚಿಸಿದೆಯಂತೆ. ಕೋಲಾರದಲ್ಲಿ ನಡೆದ ಪಕ್ಷದ ಮುಖಂಡರ ಸಭೆಯಲ್ಲಿಯೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಸ್ ಸಂತೋಷ್, ಟಿಕೆಟ್ ಬಗ್ಗೆ ಯಾರಿಗೂ ಭರವಸೆ ನೀಡಬೇಡಿ. ಪಕ್ಷ ಯಾರಿಗೆ ಟಿಕೆಟ್ ನೀಡುತ್ತೋ ಅವರ ಪರ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು ಎಂದಿದ್ದಾರೆ.

ದೆಹಲಿ ನಾಯಕರ ಈ ಸೂಚನೆ ರಾಜ್ಯ ನಾಯಕರನ್ನು ಸಂಪೂರ್ಣವಾಗಿ ಕಂಟ್ರೋಲ್ ತೆಗೆದುಕೊಳ್ಳುವುದಾಗಿದೆ. ಯಡಿಯೂರಪ್ಪ, ಬೊಮ್ಮಾಯಿ, ಈಶ್ವರಪ್ಪ, ಜಗದೀಶ್ ಶೆಟ್ಟರ್, ನಳೀನ್ ಕುಮಾರ್ ಕಟೀಲ್, ಸಿ.ಟಿ ರವಿ ಸೇರಿದಂತೆ ಯಾವೆಲ್ಲ ಘಟಾನುಘಟಿ ರಾಜ್ಯ ನಾಯಕರಿದ್ದಾರೋ ಅವರಿಗೆಲ್ಲ ಇದೊಂದು ರೀತಿಯ ಎಚ್ಚರಿಕೆ ಎಂದು ಹೇಳಲಾಗುತ್ತಿದೆ. ಅಲ್ಲಿಗೆ ತಮ್ಮ ಆಪ್ತರಿಗೆ ಟಿಕೆಟ್ ನೀಡಿ ಎಂದು ಹೇಳುವ, ಕೊಡಿಸುವ ಶಕ್ತಿಯನ್ನು ಕುಗ್ಗಿಸಲಾಗುತ್ತಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಟಿಕೆಟ್ ಮೇಲೆ ಆಸೆ ಇಟ್ಟುಕೊಂಡವರ ಕಥೆ ಏನು ಎನ್ನಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!