ಪ್ರಜಾಸ್ತ್ರ ಸುದ್ದಿ
ರಾಯಚೂರು: ಸೆಪ್ಟೆಂಬರ್ 30ರಿಂದ ಕರ್ನಾಟಕದಲ್ಲಿ ಭಾರತ ಐಕ್ಯತಾ ಯಾತ್ರೆ ಸಾಗುತ್ತಿದೆ. ಅಕ್ಟೋಬರ್ 23ಕ್ಕೆ ಕೊನೆಗೊಳ್ಳಲಿದೆ. ರಾಯಚೂರಿನಿಂದ ವಿಕರಬಾದ್ ಮೂಲಕ ತೆಲಂಗಾಣ ಪ್ರವೇಶ ಮಾಡಲಿದೆ. ಈ ಮೂಲಕ ಸುಮಾರು 20ಕ್ಕೂ ಹೆಚ್ಚು ದಿನಗಳ ಕಾಲ ರಾಜ್ಯದಲ್ಲಿ ರಾಹುಲ್ ಗಾಂಧಿ ನೇತೃತ್ವದ ಯಾತ್ರೆ ಸಾಗಿದೆ.
ಈ ಬಗ್ಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು, ಮಹಿಳೆಯರು, ರೈತರು, ಕಾರ್ಮಿಕರು, ಮಕ್ಕಳು ಸೇರಿದಂತೆ ಪ್ರತಿಯೊಂದು ಕ್ಷೇತ್ರದ ಜನರು ಉತ್ಸಾಹದಿಂದ ಭಾಗವಹಿಸಿದ್ದಾರೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ಸೇರಿ ರಾಹುಲ್ ಗಾಂಧಿ ಅವರಿಗೆ ಶುಭ ಕೋರಿದ್ದಾರೆ. ಅವರ ಭಾವನೆಗಳನ್ನು ಹಂಚಿಕೊಂಡಿದ್ದಾರೆ ಎಂದರು.
ದೇಶಕ್ಕಾಗಿ ನಾಯಕ 3,570 ಕಿಲೋ ಮೀಟರ್ ನಡೆಯಲು ನಿರ್ಧರಿಸಿದ್ದಾರೆ. ಆರಂಭದಲ್ಲಿ ನಮಗೂ ಕಷ್ಟ ಎನಿಸಿತ್ತು. ಆದರೆ, ಬಿಸಿಲು, ಮಳೆ ಲೆಕ್ಕಿಸಿದೆ ಅವರು ಸಾಗಿದ್ದಾರೆ. ಪಕ್ಷದ ಅಧಿಕಾರ ಬಿಟ್ಟು ದೇಶದಲ್ಲಿ ಬದಲಾವಣೆ ತರಲು ನಡೆಯುತ್ತಿದ್ದಾರೆ. ಜನ ಸಾಮಾನ್ಯರು ಜೀವನ ಮಾಡುವುದು ಕಷ್ಟವಾಗಿದೆ. ಇದರ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ ಎಂದು ತಿಳಿಸಿದರು.