ಪ್ರಜಾಸ್ತ್ರ ಸುದ್ದಿ
ತುಮಕೂರು: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಬರೀ ಸಂಸದ ಮಾತ್ರವಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ದೇಶಕ್ಕಾಗಿ ಜೀವ ಕಳೆದುಕೊಂಡ ಮೂವರು ಪ್ರಧಾನಿಗಳನ್ನು ಕಂಡ ಕುಟುಂಬದ ಕುಡಿ. ಎಐಸಿಸಿ ಮಾಜಿ ಅಧ್ಯಕ್ಷರು. ಹೀಗಾಗಿ ಇವರಿಗೆ ಝಡ್ ಪ್ಲಸ್ ಸೇರಿ ಹಲವು ರೀತಿಯ ಭದ್ರತೆಗಳಿವೆ. ಆದರೆ, ಭಾರತ ಐಕ್ಯತಾ ಯಾತ್ರೆಯಲ್ಲಿ ಅದನ್ನು ದಾಟಿ ಅವರು ಮಕ್ಕಳೊಂದಿಗೆ ಖುಷಿ ಪಡುತ್ತಿದ್ದಾರೆ.
ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಪಾದಯಾತ್ರೆ ಹೊರಟಿರುವ ರಾಹುಲ್ ಗಾಂಧಿ ನೇತೃತ್ವದ ತಂಡ ದಾರಿಯುದ್ದಕ್ಕೂ ಉತ್ಸಹಾದಿಂದಲೇ ಸಾಗುತ್ತಿದೆ. ಇವರಿಗೆ ಮಕ್ಕಳು, ಯುವ ಜನತೆ, ಹಿರಿಯರು, ಅಂಗವಿಕಲರು, ಮಾಜಿ ಸೈನಿಕರು, ಮಂಗಳಮುಖಿಯರು ಸೇರಿ ಜಾತಿ, ಧರ್ಮ ಮೀರಿ ಹೆಗಲು ಕೊಡುತ್ತಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ತಮಗೆ ಇರುವ ಭದ್ರತೆಯನ್ನು ಮೀರಿ ಮಕ್ಕಳೊಂದಿಗೆ ಕೂಡಿ ಖುಷಿ ಪಟ್ಟಿದ್ದಾರೆ.
ವಿವಿಐಪಿಗಳ ಪಟ್ಟಿಯಲ್ಲಿರುವ ರಾಹುಲ್ ಗಾಂಧಿ ಅವರಿಗೆ ನೀಡಿರುವ ಭದ್ರತೆ ಮೀರಿ ಹೋಗುವುದು ಕಷ್ಟ. ಇವರ ಕುಟುಂಬದ ಇತಿಹಾಸ ನೋಡಿದರೆ ತಂದೆ ಹಾಗೂ ಅಜ್ಜಿಯ ದುರಂತ ಸಾವು ಕಣ್ಮುಂದೆ ಇದೆ. ಆದರೆ, ಜನರ ಪ್ರೀತಿ, ವಿಶ್ವಾಸ, ಹಾರೈಕೆಗಳಿಂದಾಗಿ ಅವರೆ ಭದ್ರತೆಯ ಗೆರೆ ದಾಟಿ ಜನರ ಬಳಿ ಹೋಗುತ್ತಿದ್ದಾರೆ. ಈ ಮೂಲಕ ನಿಜವಾದ ನಾಯಕ ಮಾಡಬೇಕಾದ ಕೆಲಸ ಮಾಡುತ್ತಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ.