ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಶಾಸಕ ಬಿ.ವೈ ವಿಜಯೇಂದ್ರರನ್ನು ನೇಮಿಸಲಾಗಿದೆ. ಹೀಗಿದ್ದರೂ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ಇದಕ್ಕೆ ಕಾಂಗ್ರೆಸ್ ಟಾಂಟ್ ಕೊಟ್ಟಿದೆ.
ರಿಟೈರ್ಡ್ ರಾಜಕಾರಣಿ ಈಶ್ವರಪ್ಪ ಅವರೆ, ಇದೆಂತಹಾ ದುಸ್ಥಿತಿ ನಿಮ್ಮದು. ಬಿಜೆಪಿ ನಿಮ್ಮ ಮಂತ್ರಿಗಿರಿ ಕಿತ್ತುಕೊಂಡಿತು. ನಿಮ್ಮನ್ನು ಸಿಎಂ ಮಾಡದೆ ವಂಚಿಸಿತು. ಕೊನೆಗೆ ಟಿಕೆಟ್ ನಿರಾಕರಿಸಿ ರಾಜಕೀಯ ಭವಿಷ್ಯವನ್ನು ಕಸಿಯಿತು. ಈಗ ಯಡಿಯೂರಪ್ಪ ಮಗ ನಿಮ್ಮ ಮಗನ ರಾಜಕೀಯ ಭವಿಷ್ಯಕ್ಕೂ ಕಲ್ಲು ಹಾಕುವುದು ಖಚಿತ. ಬಿಜೆಪಿ ಕಾರ್ಯಕ್ರಮದಲ್ಲಿ ನಿಮಗೊಂದು ಕುರ್ಚಿಯೂ ಇಲ್ಲ ಈಗ, ನಿಮ್ಮ ವ್ಯರ್ಥಪ್ರಲಾಪದ ಬಗ್ಗೆ ನಮಗೆ ಮರುಕವಿದೆ ಎಂದು ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ಬರೆಯುವ ಮೂಲಕ ಕಾಲೆಳೆದಿದೆ.