ಪ್ರಜಾಸ್ತ್ರ ಸುದ್ದಿ
ತುಮಕೂರು: ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ನೀವು ಮತ ನೀಡಿಲ್ಲ. ಆದರೆ, ಶಾಸಕರನ್ನು ಖರೀದಿಸಿ ಲೋಕತಂತ್ರವನ್ನು ಹಾಳು ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಜಿಲ್ಲೆಯ ತುರುವೇಕೆರೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕಳೆದ ಮೂರು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರ ನಡೆಸಿದೆ. ಸಣ್ಣ ಕೆಲಸಕ್ಕೂ ಶೇಕಡ 40ರಷ್ಟು ಕಮಿಷನ್ ಪಡೆದಿದೆ. ಶಿಕ್ಷಣ, ಉದ್ಯೋಗ, ಆರೋಗ್ಯಕ್ಕೆ ಹಣ ನೀಡುವ ಬದಲು ಜನರ ಜೇಬಿಗೆ ಕತ್ತರಿ ಹಾಕಿದ್ದಾರೆ ಎಂದು ಕಿಡಿ ಕಾರಿದರು.
ನೀವು ಪ್ರಚಾರದಲ್ಲಿ ಬಂದು ಬರೀ ಮೋದಿ ಹೆಸರು ಹೇಳುತ್ತೀರಿ. ಯಡಿಯೂರಪ್ಪ, ಬೊಮ್ಮಾಯಿ ಹೆಸರು ಹೇಳಿ. ಅವರಿಗೂ ಖುಷಿಯಾಗುತ್ತೆ ಎಂದು ಕಾಲೆಳೆದರು. ನಾವು ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಏನು ಮಾಡಿದರು ಎಂದು ಹೇಳುತ್ತೇವೆ. ಹೆಣ್ಮಕ್ಕಳಿಗೆ 2 ಸಾವಿರ ರೂಪಾಯಿ, 200 ಯುನಿಟ್ ವಿದ್ಯುತ್ ಉಚಿತ, ಮಹಿಳೆಯರಿಗೆ ಉಚಿತ ಬಸ್ ಪಾಸ್, 10 ಕೆಜಿ ಅಕ್ಕಿ, ಯುವಕರಿಗೆ ಯುವನಿಧಿ ಯೋಜನೆ ಜಾರಿಗೆ ತರುತ್ತೇವೆ. ಬಿಜೆಪಿಗೆ 40 ನಂಬರ್ ತುಂಬಾ ಇಷ್ಟ. ಅವರಿಗೆ 40 ಸೀಟು ಕೊಡಿ ಎಂದು ಹೇಳಿದರು.