ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಚುನಾವಣೆ ಬಂದರೆ ಸಾಕು ರಾಜಕಾರಣಿಗಳಿಗೆ ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ರೈತರು, ಕಾರ್ಮಿಕರು ಸೇರಿ ಇತರರು ನೆನಪಾಗುತ್ತಾರೆ. ಗೆದ್ದು ಬಂದ ಮೇಲೆ ಅವರು ಬದುಕಿದ್ದಾರ ಸತ್ತಿದ್ದಾರ ಅಂತಾನೂ ನೋಡುವುದಿಲ್ಲ. ಈಗ ಬಿಜೆಪಿ ನಾಯಕರು ದಲಿತರ ಮನೆಯಲ್ಲಿ ಊಟ ಮಾಡಲು ಶುರು ಮಾಡಿದ್ದಾರೆ. ಈ ಮೂಲಕ ದಲಿತರ ಮತಬ್ಯಾಂಕ್ ಸೆಳೆಯುವ ತಂತ್ರ.
ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಹಲವು ಬಿಜೆಪಿ ನಾಯಕರು ದಲಿತರ ಮನೆಯಲ್ಲಿ ಊಟ ಮಾಡುವ ನಾಟಕದ ಬಗ್ಗೆ ಸಾರ್ವಜನಿಕರು ವಾಗ್ದಾಳಿ ನಡೆಸುತ್ತಿದ್ದಾರೆ. ಹೋಟೆಲ್ ನಿಂದ ಊಟ, ನೀರಿನ ಬಾಟಲ್, ಬ್ರ್ಯಾಂಡೆಡ್ ಕಂಪನಿಯ ಟೀ ಪೌಡರ್, ಅವರ ಹೋಗುವ ಮನೆಯಲ್ಲಿ ಒಂದಿಷ್ಟು ಅಚ್ಚುಕಟ್ಟಾದ ಅಲಂಕಾರ. ಇದನ್ನು ನೋಡಿದ ಜನರು ಯಾವ ಪುರುಷಾರ್ಥಕ್ಕೆ ಇದನ್ನು ಮಾಡಬೇಕು ಅಂತಿದ್ದಾರೆ.
ಅವರ ಜೀವನ ಮಟ್ಟ ಹೇಗಿದೆ ಎಂದು ತಿಳಿಯಬೇಕು ಅಂದರೆ ಅವರ ಮನೆಯಲ್ಲಿ ಏನು ಮಾಡುತ್ತಾರೋ ಅದನ್ನೇ ಸ್ವೀಕರಿಸಬೇಕು. ಅವರು ಕುಡಿಯುವ ನೀರನ್ನು, ಟೀಯನ್ನು ಕುಡಿಯಬೇಕು. ಅವರು ಮನೆಯಲ್ಲಿ ಸೋಫಾ, ಟೇಬಲ್ ಇಲ್ಲಂದರೆ ನೆಲದ ಮೇಲೆ ಕುಳಿತು ನೋಡಿದಾಗ ವಾಸ್ತವ ಅರಿವಾಗುವುದು. ಜನಸಾಮಾನ್ಯರ ಬೇಕು ಬೇಡಿಕೆಗಳು ಏನು ಅನ್ನೋದು ತಿಳಿದು ಅವರ ಬದುಕು ಹಸನಾಗುವಂತೆ ಮಾಡಲು ಸಾಧ್ಯ. ಇದನ್ನು ಬಿಟ್ಟು ಎಲ್ಲವನ್ನು ಸೆಟಪ್ ಮಾಡಿ ಮಾಧ್ಯಮಗಳ ಮುಂದೆ ತೋರಿಸಿಕೊಳ್ಳುವುದಕ್ಕೆ ಅವರ ಮನೆಗೆ ಹೋಗುವ ನಾಟಕ ಯಾಕೆ?