ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ವಸತಿ ಸಚಿವ ವಿ.ಸೋಮಣ್ಣ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಅನ್ನೋ ಚರ್ಚೆ ಕೆಲ ದಿನಗಳಿಂದ ಭರ್ಜರಿಯಾಗಿ ನಡೆದಿದೆ. ಬಿಜೆಪಿ ನಾಯಕರೊಂದಗಿನ ಭಿನ್ನಾಭಿಪ್ರಾಯದಿಂದ ಬೇಸತ್ತು ವಿ.ಸೋಮಣ್ಣ ಪಕ್ಷ ಬಿಡುವ ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತಹ ಘಟನೆಗಳು ಆಗಾಗ ನಡೆಯುತ್ತಿವೆ.
ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋ ಈ ವಿಚಾರಕ್ಕೆ ಮತ್ತಷ್ಟು ಶಕ್ತಿ ನೀಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಸಚಿವ ವಿ.ಸೋಮಣ್ಣ ಒಂದೇ ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವ ಫೋಟೋ ವೈರಲ್ ಆಗಿದೆ. ಇದನ್ನು ನೋಡಿದವರು ಸೋಮಣ್ಣ ಕಾಂಗ್ರೆಸ್ ಸೇರುವುದು ಪಕ್ಕಾ ಎನ್ನುತ್ತಿದ್ದಾರೆ.
ಈಗಾಗ್ಲೇ ಬಿಜೆಪಿ ಟಿಕೆಟ್ ನೀಡಿದರೆ ಸ್ಪರ್ಧಿಸುತ್ತೇನೆ. ಇಲ್ಲಂದರೆ ಇಲ್ಲ. ನನ್ನನ್ನು ಬರೀ ಬೆಂಗಳೂರಿಗೆ ಸಿಮೀತ ಮಾಡಬೇಡಿ ಎಂದು ಹೇಳಿರುವ ಸಚಿವ ವಿ.ಸೋಮಣ್ಣ ಮಗನ ರಾಜಕೀಯ ಭವಿಷ್ಯದ ಸಲುವಾಗಿ ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರಂತೆ. ಸಿಎಂ ಬೊಮ್ಮಾಯಿ ಸೇರಿ ಹಲವು ಸಚಿವರು ಮನವೊಲಿಸುವ ಕೆಲಸ ಮಾಡಿದ್ದು, ಎಷ್ಟು ಪ್ರಯೋಜನವಾಗುತ್ತೆ ಗೊತ್ತಿಲ್ಲ. ಒಟ್ಟಿನಲ್ಲಿ ಸಚಿವ ಸೋಮಣ್ಣ ನಡೆ ಕುತೂಹಲ ಮೂಡಿಸಿದೆ.