ಡ್ರ್ಯಾಗನ್ ಹಣ್ಣಿನಿಂದ ಬದುಕು ಕಟ್ಟಿಕೊಂಡ ರೈತ

178

ಕಲಬುರಗಿಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿವೃತ್ತ ಉಪನಿರ್ದೇಶಕರು ಹಾಗೂ ಬಳ್ಳಾರಿಯ ಜಿ.ಚಂದ್ರಕಾಂತ ಅವರು ಬರೆದ ವಿಶೇಷ ಲೇಖನ ಇಲ್ಲಿದೆ.

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕಾಲ್ವಿ ಗ್ರಾಮದ ಬಣಕಾರ ಶಿವನಾಗಪ್ಪ ದೊಡ್ಡತೋಟಪ್ಪ(65) ಬಡ ರೈತ. ದೊಡ್ಡ ಅವಿಭಕ್ತ ಕುಟುಂಬ. ಒಂದನೇ ತರಗತಿವರೆಗೆ ಓದಿದ್ದಾರೆ. ಬಡತನದಿಂದ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡರು. ಒಟ್ಟು 5 ಎಕರೆ ಭೂಮಿಯಲ್ಲಿ ಪಾರಂಪರಿಕ ಮೆಕ್ಕೆಜೋಳ ಮತ್ತಿತರೆ ಬೆಳೆ ಬೆಳೆಯುತ್ತಿದ್ದರಿಂದ ಅಷ್ಟಕ್ಕಷ್ಟೇ ಆದಾಯ ಬರುತ್ತಿತ್ತು. ಪದವಿ ಮುಗಿಸದ ಮಗ ಪ್ರಕಾಶ ಈಗ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಪ್ರೇರಣೆಯಿಂದ ಡ್ರ್ಯಾಗನ ಹಣ್ಣಿನ ಬೇಸಾಯ ಕೈಗೊಂಡಿದ್ದರಿಂದ ಕುಟುಂಬದ ಆದಾಯ ದ್ವಿಗುಣಗೊಳ್ಳುತ್ತಿದೆ.

ತಮ್ಮ 2.5 ಎಕರೆ ಭೂಮಿಗೆ ಸಾವಯವ ಗೊಬ್ಬರ ಬೆರೆಸಿ ಭೂಮಿಯನ್ನು ಚೆನ್ನಾಗಿ ಹದಗೊಳಿಸಿದರು. ನಂತರ 2021ರ ಏಪ್ರಿಲ್ ನಲ್ಲಿ ಹೈದ್ರಾಬಾದಿನಿಂದ ಪ್ರಕಾಶ, ಸಮಾನವಾದ ಕೆಂಪು-ಗುಲಾಬಿ ಬಣ್ಣದ ಉತ್ತಮ ತುಂಡುಗಳನ್ನು ತಂದು ಕಂಬದಿಂದ ಕಂಬಕ್ಕೆ 8 ಅಡಿ ಮತ್ತು ಸಾಲಿನಿಂದ ಸಾಲಿಗೆ 12 ಅಡಿಯಂತೆ ಒಟ್ಟು 958 ಕಂಬಗಳಿಗೆ 4000 ಬಳ್ಳಿಗಳನ್ನು ಹರಡಿಸಿದ್ದಾರೆ. ಪ್ರತಿ 2-3 ತಿಂಗಳಿಗೊಮ್ಮೆ ಬಳ್ಳಿಗಳಿಗೆ ಗೊಬ್ಬರ ಹಾಕಿ ವಾರಕ್ಕೊಮ್ಮೆ ನೀರುಣಿಸುವರು.

ಬಹುವಾರ್ಷಿಕ ಡ್ರ್ಯಾಗನ್ ಫ್ರೂಟ್ ಬೇಸಾಯಕ್ಕಾಗಿ ತೋಟಗಾರಿಕೆ ಇಲಾಖೆಯಿಂದ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಗುಂಡಿ ತೋಡಲು ಮತ್ತು ಬಳ್ಳಿ ಹರಡುವಿಕೆಗಾಗಿ 1.28 ಲಕ್ಷ ರೂಪಾಯಿ ಕಾರ್ಮಿಕರ ಖಾತೆಗೆ ನೇರವಾಗಿ ಮತ್ತು ಸಸಿಗಳ ಖರೀದಿ, ಸಾಗಣೆ, ಗೊಬ್ಬರ ಮತ್ತಿತರ ವೆಚ್ಚಗಳಿಗಾಗಿ 77,581 ರೂಪಾಯಿಗಳನ್ನು ಪಾವತಿಸಲಾಗಿದೆ. ಇದಲ್ಲದೆ ಕೊಳವೆ ಬಾವಿಗೆ ಹನಿ ನೀರಾವರಿ ಅಳವಡಿಸಿಕೊಳ್ಳಲೂ 33000 ರೂಪಾಯಿ ಸಹಾಯಧನ ನೀಡಲಾಗಿದೆ.

ತೋಟಗಾರಿಕೆ ಅಧಿಕಾರಿಗಳ ತಾಂತ್ರಿಕ ಸಲಹೆ, ಮಾರ್ಗದರ್ಶನದೊಂದಿಗೆ ಡ್ರ್ಯಾಗನ್ ಬೇಸಾಯ ಕ್ರಮಗಳನ್ನು ಅನುಸರಿಸಿದ್ದರಿಂದ 12 ತಿಂಗಳಿಂದಲೇ ಇಳುವರಿ ಪ್ರಾರಂಭವಾಗಿದೆ. ಈವರೆಗೆ 15 ಟನ್ ಡ್ರ್ಯಾಗನ್ ಹಣ್ಣಿನ ಇಳುವರಿ ಪಡೆದು 6 ಲಕ್ಷ ರೂಪಾಯಿ ಲಾಭ ಗಳಿಸಿದ್ದಾರೆ. ಪ್ರತಿ ಹಣ್ಣು 250-800 ಗ್ರಾಂ ಬರುತ್ತೆ. ಒಂದು ಕೆಜಿಗೆ 13-150ರಂತೆ ಮಾರಾಟವಾಗುತ್ತದೆ. ಹಣ್ಣು ಮಾರಾಟಗಾರರೇ ಇವರ ತೋಟದಿಂದ ನೇರವಾಗಿ ಖರೀದಿಸುತ್ತಿದ್ದಾರೆ. ಈ ಬೇಸಾಯಕ್ಕೆ ಒಟ್ಟು 8 ಲಕ್ಷ ರೂಪಾಯಿ ಖರ್ಚಾಗಿದೆ.

”ಈ ಬೇಸಾಯ ಪ್ರಾರಂಭಿಸಿದಾಗ ಹಲವು ರೈತರು ಅಪಹಾಸ್ಯ ಮಾಡಿದ್ದರೂ ಎದೆಗುಂದದೆ ಬೇಸಾಯದಲ್ಲಿ ಯಶಸ್ಸು ಕಂಡು ಮೊದಲ ಬೆಳೆ ಪಡೆದಾಗ ನನ್ನ ಇಡೀ ಕುಟುಂಬ ಖುಷಿಪಟ್ಟಿತು ಮತ್ತು ಕುಟುಂಬದಲ್ಲಿ ನೆಮ್ಮದಿ ಕಾಣುವಂತಾಗಿದೆ. ಕಡಿಮೆ ನೀರು ಮತ್ತು ಅಲ್ಪಾವಧಿಯಲ್ಲೇ ಉತ್ತಮ ಇಳುವರಿ, 20-25 ವರ್ಷಗಳವರೆಗೆ ನಿರಂತರವಾಗಿ ಲಾಭ ನೀಡುವ ಬೆಳೆಯಾಗಿದೆ. ಇದರ ಬೇಸಾಯಕ್ಕೆ ತೋಟಗಾರಿಕೆ ಇಲಾಖೆಯ ಸಹಾಯ ಸಹಕಾರ ಸಂಪೂರ್ಣ ಸಿಕ್ಕಿದೆ. ವರ್ಷಕ್ಕೆ 10 ಲಕ್ಷ ರೂಪಾಯಿ ಆದಾಯದ ನಿರೀಕ್ಷೆಯಿದೆ”.

ಪ್ರಕಾಶ ಬಣಕಾರ

ಕ್ಯಾಕ್ಟಸ್ ಜಾತಿಗೆ ಸೇರಿದ ಡ್ರ್ಯಾಗನ್ ಫ್ರೂಟ್ ಹೊಸ ತಳಿಯ ವಾಣಿಜ್ಯ ಮತ್ತು ವಿದೇಶಿ ಬೆಳೆಯಾಗಿದೆ. ತೋಟಗಾರಿಕೆ ಇಲಾಖೆಯ ಪ್ರೋತ್ಸಾಹದಿಂದ ಹಡಗಲಿ ತಾಲೂಕಿನ ಕಾಲ್ವಿ, ಇಟಿಗಿ, ಕೋಮಾರನಹಳ್ಳಿ ತಾಂಡಾ, ಮೀರಾಕರ‍್ನಹಳ್ಳಿ, ಮಹಾಜನದಹಳ್ಳಿ, ಹೊಳಲು ಮತ್ತು ಲಿಂಗನಾಯಕನಹಳ್ಳಿಯ ರೈತರೂ ಈ ಬೆಳೆಯತ್ತ ಆಕರ್ಷಿತರಾಗಿ ತಮ್ಮ ಆರ್ಥಿಕ ಸ್ಥಿತಿ ಉತ್ತಮಗೊಳಿಸಿಕೊಳ್ಳುತ್ತಿದ್ದಾರೆ. ಒಟ್ಟು ಮೂರು ಬಣ್ಣಗಳಿಂದ ಕೂಡಿರುವ ಮತ್ತು ರುಚಿಕರವಾಗಿರುವ ಈ ಹಣ್ಣು ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವುದಲ್ಲದೆ ಡಯಾಬಿಟೀಸ್, ಡೆಂಗ್ಯೂ ಜ್ವರ, ಕ್ಯಾನ್ಸರ್ ಮತ್ತು ಹೃದ್ರೋಗ ಮುಂತಾದ ರೋಗಗಳಿಗೂ ಔಷಧಿ ರೂಪದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ. ಹೆಚ್ಚಿನ ಮಾಹಿತಿಗಾಗಿ ರೈತ ಪ್ರಕಾಶ ಬಣಕಾರ ಅವರ ಈ ಮೊಬೈಲ್ ನಂಬರ್ ಗೆ (8150875058) ಸಂಪರ್ಕಿಸಬಹುದು.




Leave a Reply

Your email address will not be published. Required fields are marked *

error: Content is protected !!