ರಾಜ್ಯದಲ್ಲಿ ಎಲ್ಲಿ ನೋಡಿದ್ರೂ ಸೂರ್ಯನ ತಾಪ ಹೆಚ್ಚಾಗಿದೆ. ಇದರಿಂದ ಕರುನಾಡಿಗೆ ‘ಬರ’ ಸಿಡಿಲು ಬಡೆದ ಅನುಭವವಾಗುತ್ತಿದೆ. ಕುಡಿಯುವ ನೀರಿಗಾಗಿ ರಾಜ್ಯದ ಬಹುತೇಕ ಜಿಲ್ಲೆಯ ಜನರು ಹರಸಾಹಸ ಪಡುತ್ತಿದ್ದಾರೆ. ಪ್ರಾಣಿ, ಪಕ್ಷಿಗಳು ಗೋಳು ಮುಗಿಲುಮುಟ್ಟಿದೆ. ಅಂತರ್ಜಲ ಬರಿದಾಗಿದೆ, ಬಾವಿಗಳು ಬರಿದಾಗಿವೆ, ಬೆಳೆಗಳು ಒಣಗಿ ನಿಂತಿವೆ, ಹನಿ ನೀರಿಗೂ ತತ್ವಾರ. ಸುಡುತ್ತಿರುವ ಸೂರ್ಯನ ಶಾಕದಿಂದ ಬಳಲುತ್ತಿರುವ ರಾಜ್ಯದ ಜಲಕ್ಷಾಮ ಪರಿಸ್ಥಿತಿ ಇದು.
ಇನ್ನೂ ಉತ್ತರ ಕರ್ನಾಟಕ ಹಾಗೂ ಹೈದ್ರಾಬಾದ್
ಕರ್ನಾಟಕದ ಪ್ರತಿಯೊಂದು ಹಳ್ಳಿಗಳಲ್ಲಿ ನೀರಿನ ಅಭಾವ ಎದುರಾಗಿದ. ಒಂದ್ಕಡೆ ನೆತ್ತಿ ಮೇಲೆ
ಸುಡುತ್ತಿರುವ ಸೂರ್ಯ ಇನ್ನೊಂದ್ಕಡೆ ಬಾಯ್ತೆರೆದು ಕುಂತಿರುವ ಭೂಮಿ. ಇದರ ನಡುವೆ ಕುಡಿಯುವ
ನೀರಿಗಾಗಿ ಕಿಲೋ ಮೀಟರ್ ಗಳಷ್ಟು ದೂರ ಹೋದರೂ ಸಿಗೋದು ಅಲ್ಪಸ್ವಲ್ಪ ನೀರು. ರಾಜ್ಯದ 176 ತಾಲೂಕುಗಳ ಪೈಕಿ ಬರೋಬ್ಬರಿ 156 ತಾಲೂಕುಗಳಲ್ಲಿ
ನೀರಿಗಾಗಿ ಹಾಹಾಕಾರ ಎದ್ದಿದೆ. ಸ್ವತಃ ರಾಜ್ಯ ಸರ್ಕಾರವೇ ಇದನ್ನು ಒಪ್ಪಿಕೊಂಡಿದೆ. ಆದರೆ,
ಇದಕ್ಕೆ ಪರಿಹಾರ ನೀಡಬೇಕಾದ ಸರ್ಕಾರ ರೆಸಾರ್ಟ್ ರಾಜಕಾರಣದಲ್ಲಿ ಬ್ಯುಸಿಯಾಗಿದೆ ಅಂತಾ ಜನರು
ಹಿಡಿಶಾಪ ಹಾಕುತ್ತಿದ್ದಾರೆ.
ಎಲ್ಲಿ? ಎಷ್ಟು ತಾಪಮಾನ?
ಜಿಲ್ಲೆ ತಾಪಮಾನ (ಶೇಕಡವಾರು)
ಕಲಬುರಗಿ 43
ರಾಯಚೂರು 41.50
ಬೀದರ್ 40.60
ವಿಜಯಪುರ 40
ಬಾಗಲಕೋಟೆ 38
ಗದಗ 38
ಕಾರವಾರ 37
ಕೊಪ್ಪಳ 37
ಮುಂಗಾರು ಪೂರ್ವ ಮಳೆ ಕೊರತೆ
ರಾಜ್ಯದಲ್ಲಿ ಇಷ್ಟೊಂದು ಬಿಸಿಲು ಕಾಣಿಸಿಕೊಳ್ಳಲು ಮುಂಗಾರು ಪೂರ್ವ ಮಳೆಯ ಕೊರತೆ ಅಂತಾ ಹವಾಮಾನ ತಜ್ಞರು ಹೇಳುತ್ತಿದ್ದಾರೆ. ದಕ್ಷಿಣ ಒಳನಾಡಿನ ಕೆಲ ಪ್ರದೇಶಗಳಲ್ಲಿ ಮೇಲ್ಮೈ ಸುಳಿಗಾಳಿ, ಚಂಡಮಾರುತ ಪ್ರಭಾವದಿಂದ ಸ್ವಲ್ಪ ಮಳೆಯಾದರೂ ವಾಡಿಕೆಯಷ್ಟು ಮಳೆ ಆಗಿಲ್ಲ. ಇದರಿಂದಾಗಿ ಉತ್ತರ ಒಳನಾಡು, ಕರಾವಳಿ ಹಾಗೂ ಮಲೆನಾಡಿನಲ್ಲಿ ಪರಿಸ್ಥಿತಿ ತೀವ್ರ ಹದಗೆಟ್ಟಿದೆ.
ಸಾಕಾದ ಸೆಕೆ..
ಇನ್ನು ರಾಜ್ಯದ ಜನತೆ ಸೆಕೆಯಿಂದ ಅಕ್ಷರಶಃ ಕಂಗಾಲಾಗಿದ್ದಾರೆ. ದಿನದ 24 ಗಂಟೆ ಫ್ಯಾನ್, ಎಸಿ ಇಲ್ಲದೆ ಮನೆ ಒಳಗೆ ಕುಳಿತುಕೊಳ್ಳುವುದು ಕಷ್ಟದ ಕೆಲಸವಾಗಿದೆ. ಕಲಬುರಗಿ, ರಾಯಚೂರು, ಬೀದರ್, ವಿಜಯಪುರ, ಬಾಗಲಕೋಟೆ ಜಿಲ್ಲೆಯ ಜನ ಜೀವನ ಸಂಪೂರ್ಣ ಕೆಂಡದ ಮೇಲಿನ ಬದುಕಾಗಿದೆ. ಇದರ ಜೊತೆಗೆ ಈ ಬಾರಿ ಬೆಂಗಳೂರು ಸೇರಿದಂತೆ ಹಳೇ ಮೈಸೂರು ಭಾಗ ಹಾಗೂ ದಕ್ಷಿಣ ಕನ್ನಡದ ಜಿಲ್ಲೆಗಳಿಗೂ ಬರದ ಬಿಸಿ ತಟ್ಟಿದೆ.
ಬರಗಾಲದಿಂದ ರಾಜ್ಯಕ್ಕೆ 2 ಸಾವಿರದ 434 ಕೋಟಿ ರೂಪಾಯಿಯಷ್ಟು ನಷ್ಟವಾಗಿದ್ದು ಅಂತಾ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು ಕೆಲ ದಿನಗಳ ಹಿಂದೆ ತುಮಕೂರಿನಲ್ಲಿ ಹೇಳಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ನೆರವು ನೀಡಿ ಎಂದು ಮನವಿ ಮಾಡಿಕೊಂಡಿದ್ದಕ್ಕೆ ಕೇವಲ 949 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಅಂತಾ ತಿಳಿಸಿದ್ದರು. ಆದರೆ, ಪಕ್ಕದ ಮಹಾರಾಷ್ಟ್ರಕ್ಕೆ 4 ಸಾವಿರ ಕೋಟಿ ನೆರವು ನೀಡಿದೆ ಅಂತಾ ಹೇಳಿದ್ದ ಅವರು, ಹೀಗಿದ್ದರೂ ರಾಜ್ಯ ಸರ್ಕಾರ ಬರ ಪರಿಸ್ಥಿತಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುತ್ತಿದೆ ಎಂದಿದ್ದರು. ಆದರೆ, ಅವರು ಹೇಳಿದ ರೀತಿಯಲ್ಲಿ ಜಿಲ್ಲೆಗಳಲ್ಲಿ ಕೆಲಸವಾಗುತ್ತಿಲ್ಲ ಅನ್ನೋದು ನೂರಕ್ಕೆ ನೂರರಷ್ಟು ಸತ್ಯ. ಉಪ ಚುನಾವಣೆಗೂ ಎಲ್ಲ ಮಂತ್ರಿಗಳು ಆಯಾ ಕ್ಷೇತ್ರಗಳಿಗೆ ಹೋಗದೆ ತಂತಮ್ಮ ಕ್ಷೇತ್ರಗಳಲ್ಲಿನ ಬರದ ಸಮಸ್ಯೆಯನ್ನ ಆಲಿಸಿ ಜನರಿಗೆ ಸ್ಪಂದಿಸಬೇಕಿದೆ. ಇದರ ಜೊತೆಗೆ ರೆಸಾರ್ಟ್ ರಾಜಕಾರಣಕ್ಕೆ ಬ್ರೇಕ್ ಹಾಕಿ ರಾಜ್ಯವನ್ನ ಬರದಿಂದ ಮುಕ್ತಿಗೊಳಿಸಬೇಕಾದ ಕಾರ್ಯಕ್ಕೆ ರಾಜ್ಯ ಸರ್ಕಾರ ಮೊದಲ ಮುಂದಾಗಬೇಕಿದೆ.
ಪ್ರತಿಯೊಂದು ಕ್ಷೇತ್ರದ ತಾಜಾ ಸುದ್ದಿಯನ್ನು ಪಡೆಯಲು ಪ್ರಜಾಸ್ತ್ರ ವೆಬ್ ಪೋರ್ಟಲ್ ಫಾಲೋ ಮಾಡಿ ಮತ್ತು ಫೇಸ್ ಬುಕ್ ಪೇಜ್ ಲೈಕ್ ಮಾಡಿ.