ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಹಿಂದಿ ಹೇರಿಕೆಗೆ ಸಂಬಂಧಿಸಿದಂತೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ ಅವರು, ಸಂಸತ್ ನ ಶೂನ್ಯ ವೇಳೆ ಮಾತ್ನಾಡಿದ್ದಾರೆ. ಬಹುಸಂಸ್ಕೃತಿಯ ಭಾರತದಲ್ಲಿ ಬಹುಭಾಷೆಗಳಿವೆ. ಹಿಂದಿಯನ್ನ ನಾವು ಗೌರವಿಸುತ್ತೇವೆ. ಪ್ರೀತಿಸುತ್ತೇವೆ. ಆದ್ರೆ, ಇದಕ್ಕಿಂತ ಹೆಚ್ಚಾಗಿ ನಾವು ಕನ್ನಡವನ್ನ ಪ್ರೀತಿಸುತ್ತೇವೆ. ಯಾಕಂದ್ರೆ, ಅದು ನಮ್ಮ ಮಾತೃಭಾಷೆ ಎಂದಿದ್ದಾರೆ.
ಹಿಂದಿ ಹೇರಿಕೆಯ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಗಮನಹರಿಸಬೇಕಿದೆ ಎಂದು ಸಂಸದೆ ಸುಮಲತಾ ಅಂಬರೀಶ ಅವರು ಹೇಳಿದ್ದಾರೆ. ಸಂಸದೆ ಸುಮಲತಾರಂತೆ ರಾಜ್ಯದಿಂದ ಆಯ್ಕೆಯಾಗಿರುವ 25 ಜನ ಬಿಜೆಪಿ ಸಂಸದರು ಹಿಂದಿ ಹೇರಿಕೆ ವಿರುದ್ಧ ಮಾತ್ನಾಡ್ತಾರಾ ಅನ್ನೋ ಪ್ರಶ್ನೆ ಮೂಡಿದೆ. ರಾಜ್ಯದ ಜನರ ಭಾವನೆಗಳ ಪರವಾಗಿ ಮಾತ್ನಾಡುವುದು ಅವರ ಕರ್ತವ್ಯ. ಅವರನ್ನ ಆಯ್ಕೆ ಮಾಡಿ ಕಳುಹಿಸಿದ ಜನರು ಅನ್ನೋದಕ್ಕಿಂತ ಮುಖ್ಯವಾಗಿ ತಾಯ್ನಾಡಿನ ಭಾಷೆಯ ಮೇಲಿನ ಹೇರಿಕೆಯನ್ನ ಬಿಜೆಪಿ ಸಂಸದರು ಖಂಡಿಸುತ್ತಾರಾ ಅಥವ ತುಟಿ ಬಿಚ್ಚದೆ ಮೌನಕ್ಕೆ ಜಾರುತ್ತಾರಾ ಅನ್ನೋದನ್ನ ಜನರು ಎದುರು ನೋಡ್ತಿದ್ದಾರೆ.
ಈಗ ನಡೆಯುತ್ತಿರುವ ಸಂಸತ್ ಕಲಾಪದಲ್ಲಿ ಬಿಜೆಪಿ ಸಂಸದರ ಹಿಂದಿ ಹೇರಿಕೆ ವಿರುದ್ಧ ಮಾತ್ನಾಡದೆ ಹೋದರೆ, ಮುಂದೆ ಅವರು ನಮ್ಮಲ್ಲಿ ಕನ್ನಡ ಪ್ರೇಮ ಜಾಸ್ತಿಯಿದೆ. ಕನ್ನಡ ನಮ್ಮ ಉಸಿರು ಅಂತೆಲ್ಲ ಹೇಳಿದ್ರೆ ಯಾರೂ ಕೇಳೋದಿಲ್ಲ. ನಿಜವಾದ ಕನ್ನಡ ಪ್ರೀತಿ, ನೆಲದ ಭಾಷೆಯ ಬಗ್ಗೆ ಗೌರವ ಇದ್ದರೆ ಹಿಂದಿ ಹೇರಿಕೆ ವಿರುದ್ಧ ಧ್ವನಿ ಎತ್ತುತ್ತಾರೆ ಅನ್ನೋ ಆಶಾಭಾವನೆ ಜನರಲ್ಲಿದೆ. ಅದು ಎಷ್ಟರ ಮಟ್ಟಿಗೆ ಸತ್ಯವಾಗುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.