ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ವರುಣನ ಆರ್ಭಟಕ್ಕೆ ಸಿಲಿಕಾನ್ ಸಿಟಿಯ ಸಂಪೂರ್ಣ ಜಲಾವೃತಗೊಂಡಿದೆ. ಎಲ್ಲಿ ನೋಡಿದರೂ ನೀರೋ ನೀರು. ಜನರು ಅದೆಷ್ಟು ಹೈರಾಣಾಗಿದ್ದಾರೆ ಅಂದರೆ, ಯಾವಾಗ ಮಳೆ ನಿಲ್ಲುತ್ತೆ, ಯಾವಾಗ ನೀರು ನುಗ್ಗುವುದು ತಪ್ಪುತ್ತೆ ಅಂತಿದ್ದಾರೆ. ಇನ್ನೊಂದಕಡೆ ಐಟಿ ಉದ್ಯೋಗಿಗಳು ಟ್ರ್ಯಾಕ್ಟರ್ ನಲ್ಲಿ ಕೆಲಸಕ್ಕೆ ಹೋಗುವ ಪರಿಸ್ಥಿತಿ ಬಂದಿದ್ದು, ರಾಜ್ಯ ಸರ್ಕಾರದ ಮಾನ ಮಾರ್ಯಾದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಆಗುತ್ತಿದೆ.
ಕೆಲಸಕ್ಕೆ ಹೋಗದೆ ಇರಲು ಸಾಧ್ಯವಾಗದೆ 50 ರೂಪಾಯಿ ಕೊಟ್ಟು ಟ್ರ್ಯಾಕ್ಟರ್ ನಲ್ಲಿ ಕಚೇರಿಗೆ ಹೋಗುತ್ತಿರುವುದಾಗಿ ಯಮಲೂರು ಏರಿಯಾ ಉದ್ಯೋಗಿಗಳು ಹೇಳುತ್ತಿದ್ದಾರೆ. ಬೆಳಂದೂರು, ಕೆಂಗೇರಿ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಅತಿ ಹೆಚ್ಚು ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಂಪನಿಗಳಿರುವ ಏರಿಯಾಗಳು ಜಲಾವೃತಗೊಂಡಿದ್ದು, ಸರ್ಕಾರದ ದುರಾಡಳಿತದಿಂದ ಐಟಿ ಸಿಟಿ ಮಾನ ಕೊಚ್ಚಿಕೊಂಡು ಹೋಗುತ್ತಿದೆ.
ಕಳೆದ ಮೂರ್ನಾಲ್ಕು ತಿಂಗಳಿಂದ ಮಳೆ ಸುರಿಯುತ್ತಿದೆ. ಕಳೆದ ಬಾರಿಯೂ ಮಳೆಯಿಂದ ಸಾಕಷ್ಟು ಸಮಸ್ಯೆಯಾಗಿತ್ತು. ಇದಾದ ನಂತರ ಎಚ್ಚೆತ್ತುಕೊಳ್ಳದ ಸರ್ಕಾರ, ಬರೀ ಲೂಟಿ ಹೊಡೆಯುವುದರಲ್ಲೇ ಬೆಂಗಳೂರು ಹಾಳು ಮಾಡುತ್ತಿದೆ ಎಂದು ಸಾರ್ವಜನಿಕರು ಕಿಡಿ ಕಾರುತ್ತಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ಸರ್ಕಾರ ಸಂಪೂರ್ಣ ವಿಫಲ ಅನ್ನೋದಕ್ಕೆ ಕೈಗನ್ನಡಿ ಬೇಕೆ ಎಂದು ಪ್ರಶ್ನಿಸುತ್ತಿದ್ದಾರೆ.