ಪ್ರಜಾಸ್ತ್ರ ಸುದ್ದಿ
ಸಂಭಾಲ್: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಅದರಲ್ಲೂ ಆಡಳಿತ ನಡೆಸುವ ಸರ್ಕಾರವನ್ನು ಅಲ್ಲಿನ ಜನರು ಪ್ರಶ್ನಿಸಿದೆ. ಆದರೆ, ಅಭಿವೃದ್ಧಿ ಬಗ್ಗೆ ಪ್ರಶ್ನೆ ಕೇಳಿದ ಪತ್ರಕರ್ತನನ್ನು ಬಂಧಿಸಿದ ಘಟನೆ ಉತ್ತರ ಪ್ರದೇಶದ ಸಂಭಾಲ್ ನ ಬುದ್ಧನಗರದಲ್ಲಿ ನಡೆದಿದೆ.
ಖಾಂಡ್ವಾ ಗ್ರಾಮದಲ್ಲಿ ಚೆಕ್ ಡ್ಯಾಂ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಬಂದಿದ್ದ ಸಚಿವೆ ಗುಲಾಬ್ ದೇವಿ ಅವರನ್ನು ಪತ್ರಕರ್ತ ಸಂಜಯ್ ರಾಣಾ, ಕಳೆದ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನು ಇನ್ನು ಈಡೇರಿಸದ ಕುರಿತು ಪ್ರಶ್ನೆಗಳನ್ನು ಕೇಳಿದ್ದಾನೆ. ಇದರಿಂದ ತೀವ್ರ ಮುಜುಗರಕ್ಕೆ ಒಳಗಾದ ಸಚಿವೆ ತನ್ನ ಬೆಂಬಲಿಗರ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ ಅಲ್ಲದೇ ಪತ್ರಕರ್ತನ ವಿರುದ್ಧ ದೂರು ದಾಖಲಾಗುವಂತೆ ಮಾಡಿದ್ದಾರೆ.
ಸರ್ಕಾರದ ಕ್ರಮದಲ್ಲಿ ಮೂಗು ತೂರಿಸಿ ಕೆಲಸಕ್ಕೆ ಅಡ್ಡಿಪಡಿಸಿದ್ದಾನೆ ಎಂದು ಹೇಳಿ ಬಿಜೆಪಿ ಮುಖಂಡ ಶುಭಂ ರಾಘವ್ ದೂರು ನೀಡಿದ್ದಾರೆ. ವಾರೆಂಟ್ ಇಲ್ಲದೆ ಬಂಧಿಸುವ ಸೆಕ್ಷನ್ ಗಳಾದ ಐಪಿಸಿ 323, 506, 504 ಹಾಗೂ 151ರ ಅಡಿಯಲ್ಲಿ ಬಂಧಿಸಿದ್ದಾರೆ. ತುಂಬಾ ಗಂಭೀರ ಪ್ರಕರಣಗಳಲ್ಲಿ ಮಾತ್ರ ಈ ಸೆಕ್ಷನ್ ಗಳನ್ನು ಹಾಕಲಾಗುತ್ತೆ. ಆದರೆ, ಅಭಿವೃದ್ಧಿ ಪ್ರಶ್ನಿಸಿದ ಪತ್ರಕರ್ತನ ವಿರುದ್ಧ ಇಂತಹ ಪ್ರಕರಣಗಳನ್ನು ಹಾಕಿ ಬಂಧಿಸಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಪೊಲೀಸರು ಸಂಜಯ್ ರಾಣಾನನ್ನು ಕೋರ್ಟಿಗೆ ಹಾಜರು ಪಡಿಸಿದ ಮೇಲೆ ಜಾಮೀನು ಸಿಕ್ಕಿದೆ.