ಪ್ರಜಾಸ್ತ್ರ ಸುದ್ದಿ
ಚಿಕ್ಕಮಗಳೂರು:
ಮಳೆಗಾಲ ಶುರುವಾಯ್ತು ಅಂದ್ರೆ ಪ್ರವಾಸಿಗರಿಗೆ ಹಬ್ಬವಿದ್ದಂತೆ. ಸುತ್ತಲಿನ ಒಂದಿಷ್ಟು ಸುಂದರ ತಾಣಗಳತ್ತ ರೌಂಡ್ ಹೊಡೆದುಕೊಂಡು ಬರಲು ಪ್ಲಾನ್ ಮಾಡ್ತಾರೆ. ದಿನದ ಪಿಕ್ ನಿಕ್ ನಿಂದ ಹಿಡಿದು ವಾರದ ಟ್ರಿಪ್ ತನಕ ಸುತ್ತಾಡಿಕೊಂಡು ಬರ್ತಾರೆ. ಹೀಗಾಗಿ ಸದಾ ಹೊಸ ಹೊಸ ತಾಣಗಳನ್ನ ಹುಡುಕುತ್ತಲೇ ಇರ್ತಾರೆ. ಹಾಗಾದ್ರೆ ನೀವು ಕಲ್ಲತ್ತಗಿರಿ ನೋಡಿಲ್ಲ ಅಂದ್ರೆ ನೋಡಿ ಬರಬಹುದು.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿರುವ ಕಲ್ಲತ್ತಗಿರಿ ತುಂಬಾ ಸುಂದರವಾಗಿದೆ. ತಾಲೂಕು ಕೇಂದ್ರದಿಂದ ಕೇವಲ 20 ಕಿಲೋ ಮೀಟರದಲ್ಲಿ ಈ ಪರ್ವತ ಇದೆ. ಸಮುದ್ರಮಟ್ಟದಿಂದ 1876 ಅಡಿ ಎತ್ತರದಲ್ಲಿದೆ. ಪ್ರಕೃತಿ ಸೌಂದರ್ಯದ ಮಡಿಲಲ್ಲಿ ಹರಿದು ಬರುವ ಜಲಪಾತ ನೋಡುಗರ ಹೃನ್ಮನ ತಣಿಸುತ್ತೆ. ಗಿರಿಯ ನೆತ್ತಿಯ ಮೇಲೆ ಚೌಡೇಶ್ವರಿ, ವೀರಭದ್ರೇಶ್ವರ ದೇಗುಲ ಇದೆ. ಇದನ್ನ ವಿಜಯನಗರ ಕಾಲದಲ್ಲಿ ನಿರ್ಮಿಸಲಾಗಿದೆ ಎನ್ನಲಾಗುತ್ತೆ.
ಕಲ್ಲತ್ತಗಿರಿ ಪ್ರದೇಶ ಅಗಸ್ತ್ಯ ಋಷಿಯ ಆಶ್ರಮಗಳಲ್ಲೊಂದಾಗಿತ್ತು ಅನ್ನೋ ಪ್ರತೀತಿಯಿದೆ. ಇದಕ್ಕೆ ಕಾಲಹಸ್ತಿ ಎಂದು ಕರೆಯಲಾಗ್ತಿತ್ತು. ಮುಂದೆ ಇದು ಕಲ್ಲತ್ತಗಿರಿ, ಕಲ್ಲತ್ತಿಗಿರಿಯಾಗಿದೆ. ದೂರದಿಂದ ನೋಡಿದ್ರೆ ಗುಹಾಲಯದಂತೆ ಕಾಣಿಸುತ್ತೆ. ಜಲಪಾತದ ಸುತ್ತಮುತ್ತ ಆನೆ ಚಿತ್ರಗಳು, ಶಿವ ಪಾರ್ವತಿ, ಗಣಪತಿ, ಚೆನ್ನಕೇಶವ, ಶಿಲಾಬಾಲಕೆ ಸೇರಿದಂತೆ ಹಲವು ಮೂರ್ತಿಗಳಿವೆ. ಇಲ್ಲಿಗೆ ಹೋಗುವ ತಾಣ ಹಚ್ಚಹಸಿರಿನ ನಡುವೆಯಿದ್ದ ಸಾಕಷ್ಟು ಉಲ್ಲಾಸ ನೀಡುತ್ತೆ.
ಅತಿ ಮಳೆಯಿರುವ ಸಂದರ್ಭದಲ್ಲಿ ಹೋಗುವುದು ಅಪಾಯವಾಗಿದೆ. ಯಾಕಂದ್ರೆ, ಶಾಂತವಾಗಿ ಹರಿಯವ ಜಲಪಾತ ರಭಸದಿಂದ ಉಕ್ಕಿ ಹರಿಯಲು ಶುರು ಮಾಡುತ್ತೆ. ಹೀಗಾಗಿ ಈ ಹಿಂದೆ ಅನೇಕ ಭಕ್ತರು ಇಲ್ಲಿ ಸಿಲುಕಿಕೊಂಡ ಉದಾಹರಣೆಗಳಿವೆ. ಎಂದೂ ಬತ್ತದ ಜಲಪಾತ ಎಂದು ಹೇಳುವ ಕಲ್ಲತ್ತಗಿರಿಗೆ ಒಮ್ಮೆ ಭೇಟಿ ನೀಡಬಹುದು.