ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಚುನಾವಣೆ ಹತ್ತಿರ ಬಂದಾಗ ರಾಜಕೀಯ ಚಟುವಟಿಕೆಗಳು ಜೋರಾಗುತ್ತವೆ. ಅದರಲ್ಲಿ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಅಂದರೆ, ಅದರ ಕಾವು ಇನ್ನು ಜೋರಾಗಿರುತ್ತೆ. ಹೀಗಾಗಿ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ರಣತಂತ್ರಗಳು ಜೋರಾಗಿವೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ರಚನೆಗೆ ಕಾರಣವಾಗಿದ್ದ ಬಾಂಬೆ ಬಾಯ್ಸ್ ಬಳಗದಲ್ಲಿ ಕೆಲವರು ಮರಳಿ ಕಾಂಗ್ರೆಸ್ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಿದ್ದರಾಮಯ್ಯ ಆಪ್ತರಾಗಿದ್ದವರಲ್ಲಿದ್ದ ಎಚ್.ವಿಶ್ವನಾಥ್ ಬಿಜೆಪಿ ಸೇರಿದರು. ಉಪ ಚುನಾವಣೆಯಲ್ಲಿ ಸೋತರು. ಬಿಜೆಪಿ ಅವರನ್ನು ಎಂಎಲ್ಸಿ ಮಾಡಿದರೂ ಸಚಿವರಾಗುವ ಅವಕಾಶ ಸಿಗಲಿಲ್ಲ. ಇವರು ಇತ್ತೀಚೆಗೆ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಖರ್ಗೆ ಅವರನ್ನು ಭೇಟಿ ಮಾಡಿದ್ದ ಕುತೂಹಲ ಮೂಡಿಸಿದೆ.
ಇನ್ನು ಸಚಿವ ಎಂಟಿಬಿ ನಾಗರಾಜ್, ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ನಾನು ಬಿಜೆಪಿಗೆ ಬಂದಿದ್ದಕ್ಕೆ ಸೋತೆ ಎಂದಿದ್ದಾರೆ. ಅಲ್ಲದೆ ಬಿಜೆಪಿಯ ಕಾರ್ಯಕ್ರಮಗಳಿಂದ ಬಾಂಬೆ ತಂಡದ ಹೀರೋ ರಮೇಶ್ ಜಾರಕಿಹೊಳಿ ದೂರ ಉಳಿಯುತ್ತಿದ್ದಾರೆ. ಬಳ್ಳಾರಿಯಲ್ಲಿ ಎಸ್ಟಿ ಸಮಾವೇಶ ಮಾಡಿದಾಗಲೂ ಅತ್ತ ಸುಳಿಯಲಿಲ್ಲ. ಹೀಗಾಗಿ ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ತಂಡದ ಸದಸ್ಯರಲ್ಲಿ ಯಾರು ಮತ್ತೆ ಕಾಂಗ್ರೆಸ್ ಸೇರುತ್ತಾರೆ ಅನ್ನೋ ಪ್ರಶ್ನೆ ಕಾಡುತ್ತಿದೆ.