ಪ್ರಜಾಸ್ತ್ರ ಸುದ್ದಿ
ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಿಜೆಪಿ ವಿಪಕ್ಷ ಸ್ಥಾನದಲ್ಲಿ ಬಂದು ಕುಳಿತಿದೆ. ಆದರೆ, ಇದುವರೆಗೂ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿಲ್ಲ. ಈ ಸಂಬಂಧ ಜೂನ್ 8ರಂದು ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಚುನಾವಣೆಯಲ್ಲಿ ಸೋತ ಬಳಿಕ ಕೇಂದ್ರದ ಯಾವುದೇ ನಾಯಕರು ಇದುವರೆಗೂ ರಾಜ್ಯಕ್ಕೆ ಬಂದಿಲ್ಲ. ನಾಳೆ ಅರುಣ್ ಸಿಂಗ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಗೆದ್ದವರಿಗೆ ಶುಭಾಶಯ, ಸೋತ ಕ್ಷೇತ್ರಗಳ ಬಗ್ಗೆ ಅವಲೋಕನ ಜೊತೆಗೆ ವಿಪಕ್ಷ ನಾಯಕನ ಆಯ್ಕೆ ಕುರಿತು ಚರ್ಚೆ ನಡೆಯಲಿದೆ.
ಮಾಜಿ ಸಿಎಂ ಬೊಮ್ಮಾಯಿ ವಿಪಕ್ಷ ನಾಯಕರಾಗಲಿ ಎಂದು ಕೆಲವರು ಹೇಳುತ್ತಿದ್ದಾರೆ. ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದ ಮತ್ತೊಬ್ಬ ಲಿಂಗಾಯತ ನಾಯಕನಿಗೆ ವಿಪಕ್ಷ ನಾಯಕನ ಸ್ಥಾನ ನೀಡಿ ಅನ್ನೋ ಮಾತುಗಳಿವೆ. ಇನ್ನು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವಧಿ ಮುಗಿದಿದ್ದು, ಅವರನ್ನು ಬದಲಾಯಿಸಬೇಕಾ ಅಥವ ಮೋದಿ ಪ್ರಧಾನಿಯಾಗಿ 9ನೇ ವರ್ಷಾಚರಣೆ ಕಾರ್ಯಕ್ರಮ ಮುಗಿಯುವ ತನಕ ಮುಂದುವರೆಸಬೇಕಾ ಅನ್ನೋ ಚರ್ಚೆ ಸಹ ನಡೆಯಲಿದೆ.