ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದಿದೆ. ರಾಜ್ಯದ ಜನತೆ ಎಕ್ಸಿಟ್ ಪೋಲ್ ಅಂಕಿಅಂಶವನ್ನು ಸಹ ಉಲ್ಟಾ ಮಾಡಿದ್ದಾರೆ. ಆಡಳಿತ ವಿರೋಧಿ ಅಲೆ ದೊಡ್ಡ ಮಟ್ಟದಲ್ಲಿ ಏಳುವ ಮೂಲಕ ಬಿಜೆಪಿಗೆ ದೊಡ್ಡ ಹೊಡೆತ ನೀಡಿದ್ದಾರೆ.
ಪ್ರಧಾನಿ ಮೋದಿ, ಅಮಿತ್ ಶಾ ರಾಜ್ಯದಲ್ಲಿಯೇ ಬೀಡು ಬಿಟ್ಟವರಂತೆ ಪ್ರಚಾರ ಮಾಡಿದರು. ರಾಜ್ಯ ನಾಯಕರನ್ನು ಸಂಪೂರ್ಣವಾಗಿ ಸೈಡ್ ಲೈನ್ ಮಾಡಿ, ನಾವಿಬ್ಬರು ಇದ್ದರೆ ಸಾಕು ಚುನಾವಣೆ ಗೆಲ್ಲುತ್ತೇವೆ ಎನ್ನುವಷ್ಟರ ಮಟ್ಟಿಗೆ ಸ್ಥಳೀಯ ನಾಯಕರನ್ನು ಹಿಂದಕ್ಕೆ ತಳ್ಳಿದ ಪರಿಣಾಮ ಈಗ ಎದುರಿಸಬೇಕಾಗಿದೆ.
ಇನ್ನು ಬೆಲೆ ಏರಿಕೆ ಹೊಡೆತ, ರಾಜ್ಯದಲ್ಲಿ ಧರ್ಮದ ದಬ್ಬಾಳಿಕೆ ನಡೆದಾಗ ತಡೆಯಲಿಲ್ಲ. ಕೋಮು ಹೇಳಿಕೆಗಳನ್ನು ನಿಲ್ಲಿಸಲಿಲ್ಲ. ಬಡವರು, ಮಧ್ಯಮ ವರ್ಗದ ಜನರ ಮೇಲೆ ಬಿದ್ದ ಬಹುದೊಡ್ಡ ಆರ್ಥಿಕ ಹೊಡೆತ ತಪ್ಪಿಸಲು ಆಗಲಿಲ್ಲ. ಭ್ರಷ್ಟಾಚಾರ ತಾಂಡವಾಡಿತು. ಹಿಂದಿ ಹೇರಿಕೆ, ನಂದಿನಿ ಸಂಸ್ಥೆಯ ವಿಲೀನ ವಿಚಾರ, ಶಿಕ್ಷಕರ ನೇಮಕಾತಿ ವಿಳಂಬ, ಪಿಎಸ್ಐ ಹಗರಣ, ಬಿಜೆಪಿ ಶಾಸಕರು, ಸಚಿವರು, ಸಂಸದರು ಬಾಯಿಗೆ ಬಂದಂತೆ ಹೇಳಿಕೆಗಳನ್ನು ಕೊಟ್ಟರು. ಹೀಗೆ ಸಾಲು ಸಾಲು ಅಂಶಗಳನ್ನು ಗಮನಿಸಿದ ಜನತೆ ಬಿಜೆಪಿಗೆ ಮತದಾನದ ಮೂಲಕ ಪಾಠ ಕಲಿಸಿದ್ದಾರೆ.
ಇನ್ನು ಚುನಾವಣೆಯನ್ನು ಧರ್ಮದ ಕಾಳಗ ಎನ್ನುವ ರೀತಿಯಲ್ಲಿ ಹನುಮಾನ ವರ್ಸಸ್ ಟಿಪ್ಪು ಸುಲ್ತಾನ್ ಎನ್ನುವುದು, ಉರಿಗೌಡ, ನಂಜೇಗೌಡ ಸುಳ್ಳಿನ ಕಥೆ ಸೇರಿದಂತೆ ಜನರ ಸಮಸ್ಯೆಗಳನ್ನು ಮರೆ ಮಾಡಿ ಬರೀ ಧರ್ಮ, ಜಾತಿ ರಾಜಕೀಯ ಮುಂದೆ ಮಾಡುವ ಮೂಲಕ ಗೆಲ್ಲುತ್ತೇವೆ ಎಂದು ಅತಿಯಾದ ವಿಶ್ವಾಸ ಹೊಂದಿದ ಬಿಜೆಪಿ ಇದರಿಂದ ಪಾಠ ಕಲಿಯಬೇಕಿದೆ.
ರಾಹುಲ್ ಗಾಂಧಿ ಅವರನ್ನು ಪ್ರತಿ ಬಾರಿ ವ್ಯಂಗ್ಯ ಮಾಡುತ್ತಿದ್ದ ಬಿಜೆಪಿ ನಾಯಕರಿಗೆ ಈ ಫಲಿತಾಂಶ ತಲೆ ತಗ್ಗಿಸುವಂತೆ ಮಾಡಿದೆ. ಮಲ್ಲಿಕಾರ್ಜುನ್ ಖಾರ್ಗೆ ಎಐಸಿಸಿ ಅಧ್ಯಕ್ಷರಾದ ಮೇಲೆ ಕಾಂಗ್ರೆಸ್ ಗೆಲುವಿನ ಟ್ರ್ಯಾಕ್ ಗೆ ಮರಳುತ್ತಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಪ್ರಚಾರ ಸಹ ಕೈ ಹಿಡಿಯುತ್ತಿದೆ. ಇತ್ತೀಚೆಗೆ ನಡೆದ ಹಿಮಾಚಲ ಪ್ರದೇಶ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಿದೆ. ಈ ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು, ಇದರಲ್ಲಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಸೇರಿದಂತೆ ರಾಜ್ಯ ನಾಯಕರ ಜೊತೆಗೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಅವರ ಪಾತ್ರ ಕೆಲಸ ಮಾಡಿದೆ ಅನ್ನೋದು ಮಾತ್ರ ಸತ್ಯ.