ಪ್ರಜಾಸ್ತ್ರ ಸುದ್ದಿ
ಸಿಂದಗಿ: ಪಟ್ಟಣದ ಸಾರಂಗಮಠ ಗಚ್ಚಿನನಮಠದ ಪೂಜ್ಯ ಚೆನ್ನವೀರಸ್ವಾಮೀಜಿ ಅವರ 129ನೇ ಜಯಂತ್ಯುತ್ಸವ ನಿಮಿತ್ತ ಕಳೆದ ನವೆಂಬರ್ 7ರಿಂದ ನಿರಂತರವಾಗಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ನವೆಂಬರ್ 28ರ ಸೋಮವಾರ ಸಂಜೆ ಕಾಶೀಪೀಠದ ನೂತನ ಶ್ರೀಗಳ ಅಡ್ಡಪಲ್ಲಕಿ ಉತ್ಸವ ನಡೆಯಿತು.
ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರ ನೇತೃತ್ವದಲ್ಲಿ 1008 ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವಾತ್ಪಾದಂಗಳವರ ಅಡ್ಡಪಲ್ಲಕಿ ಉತ್ಸವ ಪಟ್ಟಣದ ಗಚ್ಚಿನಮಠದ ವೀರಭದ್ರೇಶ್ವರ ದೇವಸ್ಥಾನದಿಂದ ಸಾರಂಗಮಠದವರೆಗೂ ನಡೆಯಿತು. ಈ ವೇಳೆ ವಿವಿಧ ಮಠಾಧೀಶರು, ಭಕ್ತರು ಭಾಗವಹಿಸಿದ್ದರು.
ನವೆಂಬರ್ 29ರಂದು ವೀರಭದ್ರೇಶ್ವರ ಹಾಗೂ ಭದ್ರಕಾಳಿ ಅಮ್ಮನವರ ಜಾತ್ರಾ ಮಹೋತ್ಸವ ನಡೆಯಲಿದೆ. ಮಹಿಳೆಯರು ಬೆಳ್ಳಿ ತೇರು ಎಳೆಯುವ ಮೂಲಕ ಅದ್ಧೂರಿಯಾಗಿ ಜಾತ್ರೆ ನಡೆಯಲಿದೆ. ಈ ವೇಳೆ ಕೊಕಟನೂರ, ಕನ್ನೊಳ್ಳಿ, ಕಲಕೇರಿ, ಮಳ್ಳಿ, ಕೋರವಾರ, ಸಿಂದಗಿಯ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ.