ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ
ಬೆಂಗಳೂರು: ಕಾವ್ಯ ಎಂದರೆ ಸಾಲು ಸಾಲು ಪದಗಳ ಜೋಡನೆ ಅಲ್ಲ. ಸಂಕ್ಷಿಪ್ತವಾಗಿ ಪ್ರತಿಮೆ ತೋರಿಸುವುದು ಎಂದು ಕಾವ್ಯ ರಚನೆಯ ಕುರಿತು ಕಿವಿಮಾತುಗಳನ್ನು ಹಿರಿಯ ಸಾಹಿತಿ ಬಿ.ಆರ್.ಪೋಲೀಸ್ ಪಾಟೀಲ್ ಅವರು ಹೇಳಿದರು. ದ್ವನಿ ರಂಗ ತಂಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಇತ್ತೀಚಿಗೆ ಪ್ರಯೋಗ ಸ್ಟುಡಿಯೋದಲ್ಲಿ ಆಯೋಜಿಸಿದ್ದ ‘ಸ್ವರಚಿತ ಕವನ ವಾಚನ ಮತ್ತು ನಾಟಕದ ಓದು’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಧ್ವನಿ ತಂಡದ ಪ್ರಭಾಕರ್ ರಾವ್ ಅವರು, ತಮ್ಮ ತಂಡ ಇಲ್ಲಿಯವರೆಗೂ ನಡೆಸಿಕೊಂಡ ಕಾರ್ಯಕ್ರಮಗಳು ಹಾಗೂ ಸಾಹಿತ್ಯ, ನಾಟಕದ ಪರಿಚಾರಿಕೆ ಕುರಿತು ಮಾತನಾಡಿದರು. ನಂತರ ಬಿ.ಆರ್.ಪೋಲೀಸ್ ಪಾಟೀಲ್ ಅವರ ‘ನಾನಾನೆಂಬುದು ನಾನಲ್ಲ’ ಎಂಬ ನಾಟಕವನ್ನು ಧ್ವನಿ ತಂಡದ ಸದಸ್ಯರು ಸಭಿಕರಲ್ಲಿ ರೋಮಾಂಚನವಾಗುವಂತೆ ಓದಿದರು.
ಸುಮಾರು 10ಕ್ಕೂ ಹೆಚ್ಚು ಯುವ ಕವಿಗಳು ಭಾಗವಹಿಸಿ ಓದಿದ ಕವಿತೆಗಳು ಶ್ರೇಷ್ಠ ಕವಿಗಳ ಕವನಗಳಿಗಿಂತಲೂ ಕಡಿಮೆಯೇನಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಮೆಚ್ಚುಗೆಯನ್ನು ಸೂಚಿಸಲಾಯಿತು.
ಅರ್ಚನಾ ವೆಂಕಟೇಶ್ ಪ್ರಾರ್ಥಿಸಿದರು. ಚಂದ್ರಶೇಖರ ಹಿರೇಮಠ ಮತ್ತು ರಂಗನಿಧಿ.ಜೆ ನಿರೂಪಿಸಿದರು. ಪ್ರದೀಪ ಮಳ್ಳೂರ್, ರೇಣುಕಾಚಾರ್ಯ ಹಿರೇಮಠ, ಕುಮಾರ್ ಕಶ್ಯಪ್, ವಾಟಾಳ ಬಸವರಾಜು, ಸುರೇಶ ಹಿರೆಣ್ಣವರ ಸೇರಿ ಅನೇಕರು ಉಪಸ್ಥಿತರಿದ್ದರು.