ಪ್ರಜಾಸ್ತ್ರ ಸುದ್ದಿ
ಹೊಸಪೇಟೆ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಡಿಂಪಿಲ್ ಕ್ವೀನ್ ರಚಿತಾ ರಾಮ್ ನಟನೆಯ ಕ್ರಾಂತಿ ಸಿನಿಮಾದ ಎರಡನೇ ಹಾಡು ಬೊಂಬೆ ಬೊಂಬೆ ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಭಾನುವಾರ ಸಂಜೆ ಬಿಡುಗಡೆಗೊಳಿಸಲಾಗಿದೆ. ಆದರೆ, ಈ ವೇಳೆ ದಿವಂಗತ ನಟ ಡಾ.ಪುನೀತ್ ರಾಜಕುಮಾರ್ ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ನಗರದ ವಾಲ್ಮೀಕಿ ವೃತ್ತದಲ್ಲಿ ತೆರೆದ ಲಾರಿಯಲ್ಲಿ ನಡೆದ ಹಾಡು ಬಿಡುಗಡೆ ಕಾರ್ಯಕ್ರಮ ನಡೆಸಲಾಗಿತ್ತು. ಇದಕ್ಕಾಗಿ ಎಲ್ಲೆಡೆ ದರ್ಶನ್ ಫೋಟೋ ಬ್ಯಾನರ್, ಕಟೌಟ್ ಹಾಕಲಾಗಿತ್ತು. ಅದರಂತೆ ಪುನೀತ್ ಅಭಿಮಾನಿಗಳು ಅವರ ಫೋಟೋ ಹಾಕಿದ್ದರು. ಆದರೆ, ಸಂಜೆ ಹಾಡು ಬಿಡುಗಡೆ ವೇಳೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಟ ದರ್ಶನ್, ನಟಿ ರಚಿತಾ ರಾಮ್ ಮೇಲೆ ಚಪ್ಪಲಿ ಎಸೆದ ಘಟನೆ ಸಹ ನಡೆದಿದೆ.
ಯಾವ ಕಾರಣಕ್ಕೆ ಈ ರೀತಿಯಾಗಿ ನಡೆದುಕೊಂಡಿದ್ದಾರೆ ಅನ್ನೋದು ಗೊತ್ತಾಗಿಲ್ಲ. ಆದರೆ, ಚಿತ್ರ ತಂಡದ ಮೇಲೆ ಚಪ್ಪಲಿ ಎಸೆದ ಘಟನೆಗೆ ಎಲ್ಲಡೆಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವಾಗ್ದಾಳಿ ನಡೆಸಲಾಗುತ್ತಿದೆ. ಇಡೀ ಘಟನೆ ಕನ್ನಡ ಚಿತ್ರರಂಗಕ್ಕೆ ಮಾಡಿದ ಅವಮಾನ ಎಂದು ದರ್ಶನ್ ಫ್ಯಾನ್ಸ್ ಸೇರಿ ಚಿತ್ರ ರಸಿಕರು ವಾಗ್ದಾಳಿ ನಡೆಸಿದ್ದಾರೆ.