ನಾಳೆ ಸಿಂದಗಿಯಲ್ಲಿ ಮಾಧ್ಯಮರಂಗ ಫೌಂಡೇಶನ್ ಉದ್ಘಾಟನೆ

233

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಸಾಹಿತ್ಯ, ರಂಗಭೂಮಿ, ಸಿನಿಮಾ, ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಚಟುವಟಿಕೆಗಳ ಆಶಯದಲ್ಲಿ ಮಾಧ್ಯಮರಂಗ ಫೌಂಡೇಶನ್ ಹುಟ್ಟು ಹಾಕಲಾಗಿದ್ದು, ವಚನ ಮಂಟಪ, ವಿಜಯಪುರ ಇವರ ಸಹಯೋಗದಲ್ಲಿ ಜನವರಿ 28 ಶನಿವಾರ ಮಧ್ಯಾಹ್ನ 3 ಗಂಟೆಗೆ ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಉದ್ಘಾಟನೆಯಾಗಲಿದೆ ಎಂದು ಫೌಂಡೇಶನ್ ಅಧ್ಯಕ್ಷ ನಾಗೇಶ ತಳವಾರ ತಿಳಿಸಿದರು.

2016ರಲ್ಲಿ ಬೆಂಗಳೂರಲ್ಲಿ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿರುವ ಸ್ನೇಹಿತರು ಕೂಡಿಕೊಂಡು ತಂಡವನ್ನು ರಚಿಸಿ ಬೆಂಗಳೂರು, ಧಾರವಾಡ, ವಿಜಯಪುರ ಭಾಗದಲ್ಲಿ ಹತ್ತು ಹಲವು ವಿಭಿನ್ನ ಕಾರ್ಯಕ್ರಮಗಳನ್ನು ಮಾಡಿದ್ದು, ಕೋವಿಡ್ ಕಾರಣಕ್ಕೆ ತಂಡದ ಚಟುವಟಿಕೆ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಮತ್ತೆ ತಂಡವನ್ನು ನೋಂದಾಯಿಸಿ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗಲಾಗುವುದು ಅಂತಾ ತಿಳಿಸಿದರು.

ಪಟ್ಟಣದ ಗುರುದೇವ ಆಶ್ರಮದ ಶಾಂತಗಂಗಾಧರ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿಕೊಳ್ಳಲಿದ್ದಾರೆ. ಶಾಸಕ ರಮೇಶ ಭೂಸನೂರ ಉದ್ಘಾಟಿಸಲಿದ್ದಾರೆ. ಫೌಂಡೇಶನ್ ಅಧ್ಯಕ್ಷ ನಾಗೇಶ ತಳವಾರ ಅಧ್ಯಕ್ಷತೆ, ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ, ಪತ್ರಕರ್ತ ಪರಶುರಾಮ ಭಾಸಗಿ, ಖ್ಯಾತ ವೈದ್ಯ ಡಾ.ಅನಿಲ ನಾಯಕ, ಪುರಸಭೆ ಸದಸ್ಯೆ ಪ್ರತಿಭಾ ಶಿವುಕುಮಾರ ಕಲ್ಲೂರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಕೊಂಡಗೂಳಿಯ ಆರೂರು ಗೆಳೆಯರ ಬಳಗದ ಅಧ್ಯಕ್ಷ ಮಡಿವಾಳಪ್ಪ ಕರದಾಳಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುತ್ತಿದೆ ಅಂತಾ ತಿಳಿಸಿದರು.

ಈ ವೇಳೆ ಫೌಂಡೇಶನ್ ಸಹ ಕಾರ್ಯದರ್ಶಿ ಮಲ್ಲು ಹಿರೋಳ್ಳಿ, ಸದಸ್ಯ ರಮೇಶ ಯಳಮೇಲಿ, ಶಿಕ್ಷಕರು ಸಂಜೀವಕುಮಾರ ಡಾಂಗಿ, ಸುದೀಪ ಹಿರೋಳ್ಳಿ ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!