ಪ್ರಜಾಸ್ತ್ರ ಸುದ್ದಿ
ಚಿತ್ರದುರ್ಗ: ಇಲ್ಲಿನ ಮುರುಘಾಮಠದ ಶಿವಮೂರ್ತಿ ಸ್ವಾಮೀಜಿ ವಿರುದ್ಧದ ಫೊಕ್ಸೋ ಪ್ರಕರಣಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಇಬ್ಬರು ಬಾಲಕಿಯರ ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರ ವರದಿ ಪ್ರಕಾರ ಅತ್ಯಾಚಾರ ನಡೆದಿಲ್ಲವೆಂದು ತಿಳಿದು ಬಂದಿದೆ.
ಮಠದ ಅಪ್ರಾಪ್ತೆಯರಿಬ್ಬರು ತಮ್ಮ ಮೇಲೆ ಪದೆಪದೆ ಅತ್ಯಾಚಾರವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಆದರೆ, ಜಿಲ್ಲೆಯ ಮುಖ್ಯ ವೈದ್ಯರೊಬ್ಬರು ನಡೆಸಿದ ಪರೀಕ್ಷೆಯಲ್ಲಿ ಬಾಲಕಿಯರ ಮೇಲೆ ರೇಪ್ ಆಗಿಲ್ಲವೆಂದು ವರದಿಯಲ್ಲಿ ತಿಳಿಸಲಾಗಿದೆ.
ಈ ಪ್ರಕರಣದಲ್ಲಿ ಸ್ವಾಮೀಜಿ ಸೇರಿದಂತೆ ವಸತಿ ನಿಲಯದ ವಾರ್ಡನ್ ರಶ್ಮಿ, ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ ಬಸವರಾಜನ್ ಹಾಗೂ ಪತ್ನಿ ಸೌಭಾಗ್ಯ ಸಹ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಬಸವರಾಜನ್ ದಂಪತಿಗೆ ಜಾಮೀನು ಸಿಕ್ಕಿದ್ದು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಈಗ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿಲ್ಲ ಅನ್ನೋ ವರದಿ ಬಂದಿದ್ದು, ಸಾರ್ವಜನಿಕರು ಸಾಕಷ್ಟು ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಹಳೆ ವಿದ್ಯಾರ್ಥಿನಿಯರು ಸೇರಿ ಅನೇಕರ ವಿಚಾರಣೆ ನಡೆಸಲಾಗಿದೆ. ಚಾರ್ಜ್ ಶೀಟ್ ನಲ್ಲಿ ಸಂತ್ರಸ್ತೆಯರು ಹೇಳಿದ ಹೇಳಿಕೆಗಳು ಸಾಕಷ್ಟು ಭಯಾನಕವಾಗಿವೆ. ಈಗ ಬಂದಿರುವ ವರದಿ ಕುರಿತು ಆಕ್ರೋಶದ ಜೊತೆಗೆ ಅನುಮಾನ ವ್ಯಕ್ತವಾಗಿದ್ದು, ಸ್ವಾಮೀಜಿಗೆ ಬೇಲ್ ಸಿಗುತ್ತಾ ಇನ್ನು ಜೈಲಿನಲ್ಲಿಯೇ ಇರುತ್ತಾರ ಕಾದು ನೋಡಬೇಕು.