ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ: ಇಂದಿನಿಂದ ಹುಬ್ಬಳ್ಳಿ-ಧಾರವಾಡದಲ್ಲಿ ಯುವಜನೋತ್ಸವ ನಡೆಯಲಿದೆ. ಸಂಜೆ ಪ್ರಧಾನಿ ಮೋದಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಹೀಗಾಗಿ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ನಾಯಕರಿಗೆ ವಿಮಾನ ನಿಲ್ದಾಣದಲ್ಲಿ ಆರತಿ ಬೆಳಗಿ, ತಿಲಕವಿಟ್ಟು ಸ್ವಾಗತಿಸಲಾಗುತ್ತಿದೆ. ಅದರಂತೆ ಸಿಎಂ ಬೊಮ್ಮಾಯಿ ಅವರ ಹಣೆಗೆ ಹಚ್ಚಿದ ತಿಲಕ ಒರೆಸಿಕೊಂಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುವಷ್ಟರಲ್ಲಿಯೇ ತಿಲಕ ಅಳಿಸಿಕೊಂಡಿದ್ದಾರೆ. ಇದು ಹಿಂದುತ್ವವನ್ನೇ ಅಜೆಂಡಾ ಮಾಡಿಕೊಂಡಿರುವ ಬಿಜೆಪಿ ಪಕ್ಷದ ಮುಖ್ಯಮಂತ್ರಿಯೊಬ್ಬರ ನಡೆಗೆ ಸ್ವಪಕ್ಷ ಹಾಗೂ ಹಿಂದೂ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದೆ. 2012ರಲ್ಲಿ ಮಂಗಳೂರಲ್ಲಿ ಒಂದು ದಿನ ಯುವಜನೋತ್ಸವ ನಡೆದಿತ್ತು. 10 ವರ್ಷಗಳ ಬಳಿಕ ಉತ್ತರ ಕರ್ನಾಟಕದಲ್ಲಿ 5 ದಿನಗಳ ಕಾಲ ಕಾರ್ಯಕ್ರಮ ನಡೆಯುತ್ತಿದೆ. ಇಂತಹ ಹೊತ್ತಿನಲ್ಲಿ ಸಿಎಂ ನಡೆ ಒಂದಿಷ್ಟು ಚರ್ಚೆ ಹುಟ್ಟು ಹಾಕಿದೆ.