ಕಲಬುರಗಿ : ಸ್ವತಃ ಸಿಎಂ ಎದುರೇ ನಿಖಿಲ್ ಎಲ್ಲಿದ್ದಿಯಪ್ಪಾ ಅಂತಾ ಅರ್ಚಕರೊಬ್ಬರು ಹೇಳಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ನಿನ್ನೆ ಕಲಬುರಗಿಯ ಅಫ್ಜಲ್ ಪುರ ತಾಲೂಕಿನ ದೇವಳ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ಸಿಎಂ ಕುಮಾರಸ್ವಾಮಿ ಭೇಟಿ ನೀಡಿದ್ದರು. ಈ ವೇಳೆ ಅರ್ಚಕರೊಬ್ಬರು ಸಿಎಂ ಎದುರೇ ನಿಖಿಲ್ ಎಲ್ಲಿದ್ದೀಯಪ್ಪಾ ಅಂತಾ ಕೇಳಿದ್ದಾರೆ. ಇದರಿಂಗಾಗಿ ದೇವಸ್ಥಾನದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಈ ಬಗ್ಗೆ ವಿಚಾರಣೆ ನಡೆಸಿದಾಗ, ಅರ್ಚಕ ದತ್ತಾತ್ರೆಯ ಅವರ ಮಗನ ಹೆಸರು ಸಹ ನಿಖಿಲ್ ಆಗಿದೆ. ಆ ಹುಡುಗ ಪೂಜೆಗೆ ಸಾಮಗ್ರಿ ತರಲು ಹೋಗಿದ್ದನಂತೆ. ಆದ್ರೆ, ಜನಜಂಗುಳಿಯ ನಡುವೆ ಸಿಲುಕಿಕೊಂಡಿದ್ದಕ್ಕೆ, ಅರ್ಚಕ ದತ್ತಾತ್ರೆಯ ಅವರು ನಿಖಿಲ್ ಎಲ್ಲಿದ್ದೀಯಾ ಅಂತಾ ಜೋರಾಗಿ ಕೂಗಿದ್ದಾರೆ ಅಂತಾ ಹೇಳಲಾಗ್ತಿದೆ.
ಇಡೀ ಘಟನೆಯಿಂದಾಗಿ ಕೆರಳಿದ ಜೆಡಿಎಸ್ ಕಾರ್ಯಕರ್ತರು ಅರ್ಚಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆ ವಿಕೋಪಕ್ಕೆ ಹೋಗುವುದನ್ನ ತಿಳಿದ ಅರ್ಚಕ, ಸಿಎಂ ಅವರ ಎದುರು ಘಟನೆಯ ವಿವರ ತಿಳಿಸಿ, ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ.