ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಶುಕ್ರವಾರ ಪ್ರಧಾನಿ ಮೋದಿ ಬೆಂಗಳೂರಿಗೆ ಬಂದು ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಇದಾದ ಬಳಿಕ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. ಈ ಸಾರ್ವಜನಿಕರ ಸಭೆಗೆ ಜನರನ್ನು ಕರೆದುಕೊಂಡು ಬರಲು ಜನರಿಗೆ ದುಡ್ಡು ಕೊಡಲಾಗಿದೆ ಎಂದು ತಿಳಿದು ಬಂದಿದೆ. ಇದೀಗ ತಮಗೆ ದುಡ್ಡು ಕೊಟ್ಟಿಲ್ಲ ಎಂದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಕೂಲಿ ಕಾರ್ಮಿಕರು ಶಿಡ್ಲಘಟ್ಟ ಪೊಲೀಸ್ ಠಾಣೆಗೆ ಹೋಗಿರುವ ಘಟನೆ ನಡೆದಿದೆ. ಒಬ್ಬರಿಗೆ 500 ರೂಪಾಯಿ ಕೊಡುತ್ತೇವೆ ಎಂದು ಹೇಳಿ, ಕೆಲಸಕ್ಕೆ ಹೋಗುವವರನ್ನು ಬಿಡಿಸಿ ಕರೆದುಕೊಂಡು ಹೋಗಿದ್ದಾರೆ. ನಾವು 40 ಜನ ಹೋಗಿದ್ದೇವೆ. ಸಂಜೆ ವಾಪಸ್ ಬಂದಾಗ ಒಬ್ಬರಿಗೆ ನೂರು ರೂಪಾಯಿ ಕೊಡಲು ಬಂದಿದ್ದರು ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇದು ವೈರಲ್ ಆಗಿದ್ದು ಕಾಂಗ್ರೆಸ್ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ. ಕಮಿಷನ್ ಲೂಟಿ ಈಗ ಶೇಕಡ 100ರಷ್ಟು ಆಗಿದೆಯೇ ಎಂದು ಕಾಲೆಳೆದಿದೆ.