ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಪ್ರಧಾನಿ ಮೋದಿ ಗುರುವಾರ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಕೊಡೇಕಲ್ ಗ್ರಾಮದಲ್ಲಿ 4,223 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ನಂತರ ಕಲಬುರಗಿ ಜಿಲ್ಲೆಯ ಮುಳಖೇಡದಲ್ಲಿ ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಿದ್ದಾರೆ.
51,900 ಕುಟುಂಬಗಳಿಗೆ ಕಂದಾಯ ಗ್ರಾಮದ ಹಕ್ಕು ಪತ್ರ ವಿತರಣೆ ಮಾಡಲಿದ್ದಾರೆ. ಲಂಬಾಣಿ ಮಹಿಳೆಯರು ಸಾಂಪ್ರದಾಯಕ ಉಡುಪಿನಲ್ಲಿ ಪ್ರಧಾನಿಯನ್ನು ಸ್ವಾಗತಿಸಲಿದ್ದಾರೆ. ಇದಕ್ಕಾಗಿ ನೆರೆಯ ವಿಜಯಪುರ ಜಿಲ್ಲೆಯ ವಿವಿಧ ತಾಲೂಕುಗಳ ತಾಂಡಾದಿಂದಲೂ ಜನರನ್ನು ಕರೆದುಕೊಂಡು ಹೋಗಲಾಗುತ್ತಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ.
ಕಲಬುರಗಿ ಹಾಗೂ ವಿಜಯಪುರ ಜಿಲ್ಲೆಯ ಎಲ್ಲೆಲ್ಲಿ ತಾಂಡಾಗಳಿವೆಯೋ ಅಲ್ಲಿಂದ ಜನರನ್ನು ಕರೆದುಕೊಂಡು ಬರಲು ಆಯಾ ತಾಲೂಕು ಆಡಳಿತ ಇಲಾಖೆ ಅಧಿಕಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆಯಂತೆ. ಓರ್ವ ಸಿಬ್ಬಂದಿಗೆ 1-2 ತಾಂಡಾಗಳ ಜವಾಬ್ದಾರಿ ನೀಡಲಾಗಿದ್ದು, ಅವರನ್ನು ಕರೆದುಕೊಂಡು ಹೋಗುವುದು, ಬರುವುದು ಅವರ ಜವಾಬ್ದಾರಿಯಾಗಿದೆ. ಅವರು ಶೌಚಾಲಯಕ್ಕೆ ಹೋದರು ಅವರೊಂದಿಗೆ ಇರಬೇಕು ಎಂದು ಹೇಳಲಾಗಿದೆ ಎಂದು ಸಿಬ್ಬಂದಿಯೊಬ್ಬರು ಹೇಳಿದ್ದಾರೆ.
ಸುಮಾರು 50 ಲಂಬಾಣಿ ಮಹಿಳೆಯರನ್ನು ಅವರ ಸಾಂಪ್ರದಾಯಿಕ ಉಡುಪಿನಲ್ಲಿ ಕರೆದುಕೊಂಡು ಬಂದು ಪ್ರಧಾನಿಯವರನ್ನು ಸ್ವಾಗತಿಸಲು ಮುಂಜಾನೆ 6.30ರಿಂದ ಫಿಲ್ಡ್ ಗೆ ಇರಲು ಅಧಿಕಾರಿಗಳಿಗೆ, ಸಿಬ್ಬಂದಿಗೆ ಹೇಳಲಾಗಿದೆಯಂತೆ. ಇದರಿಂದಾಗಿ ಅಧಿಕಾರಿಗಳು ಚುನಾವಣೆ ಮುಗಿಯುವುದರೊಳಗೆ ನಾವೆಲ್ಲ ಸತ್ತು ಹುಟ್ಟುತ್ತೇವೆ ಎಂದು ಹಣೆ ಹಣೆ ಬಡೆದುಕೊಳ್ಳುತ್ತಿದ್ದಾರೆ.