ದೇವರಹಿಪ್ಪರಗಿ, ವಿಜಯಪುರ: ಕೆರೆಗೆ ನೀರು ಹರಿಸಿ ಒಂದೇ ದಿನದಲ್ಲಿ ಅದನ್ನ ಬೇರೆ ಕಡೆ ತಿರುಗಿಸಿದ ಕಾರಣಕ್ಕೆ, ದೇವರಹಿಪ್ಪರಗಿ ಪಟ್ಟಣದಲ್ಲಿ ರೈತರು ಜಾನುವಾರುಗಳ ಸಮೇತ ಪ್ರತಿಭಟನೆ ನಡೆಸಿದ್ದಾರೆ. ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ರೈತರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ವಿಜಯಪುರ ಜಿಲ್ಲೆ ಭೀಕರ ಬರಗಾಲಕ್ಕೆ ತುತ್ತಾಗಿದೆ. ಹೀಗಾಗಿ ಜಿಲ್ಲೆಯ ಕೆಲವು ಗ್ರಾಮಗಳ ಕೆರೆಗಳಿಗೆ ಕಾಲುವೆ ಮೂಲಕ ನೀರು ಹರಿಸಿ, ಜನರ ಬವಣೆ ತೀರಿಸಲು ಜಿಲ್ಲಾಡಳಿತ ಮುಂದಾಗಿದೆ. ಅದೇ ರೀತಿ ದೇವರಹಿಪ್ಪರಗಿ ಪಟ್ಟಣದ ಕೆಲ ಕೆರೆಗಳಿಗೆ ನೀರು ಹರಿಸಿದೆ. ಆದ್ರೆ, ಅದು ಕೇವಲ ಒಂದು ದಿನಕ್ಕೆ ಸೀಮಿತ ಮಾಡಿ, ನಾಗಠಾಣ ಕೆರೆಗೆ ನೀರು ತಿರುಗಿಸಲಾಗಿದೆ ಅಂತಾ ಆರೋಪಿಸಿ ರೈತರು ಪ್ರತಿಭಟನೆ ನಡೆಸ್ತಿದ್ದಾರೆ.
ಜಲ್ಲಾಡಳಿತದ ಈ ಕ್ರಮದಿಂದ ಆಕ್ರೋಶಗೊಂಡ ರೈತರು, ಜಾನುವಾರುಗಳ ಸಮೇತ ಬಂದು, ಪಟ್ಟಣ ಪಂಚಾಯಿತಿ ಹಾಗೂ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸ್ತಿದ್ದು, ಜಿಲ್ಲಾಧಿಕಾರಿಗಳು ಬಂದು ನಮ್ಮ ಸಮಸ್ಯೆಯನ್ನ ಕೇಳಬೇಕೆಂದು ರೈತ ಮುಖಂಡ ಅಜೀಜ್ ಎಲಿಗಾರ್ ಹೇಳಿದ್ದಾರೆ.