6 ಬಾರಿ ತಾಯ್ತನದ ಖುಷಿ ಕಮರಿದ ಕಲಾವಿದೆಯ ಕಥೆ

837

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಮದುವೆ, ಮಗು ಇತ್ಯಾದಿ ಸೇರಿದಂತೆ ಹೆಣ್ಣಿನ ಜೀವನದಲ್ಲಿ ನಡೆಯುವ ತಾಕಲಾಟ, ಸಂಘರ್ಷದ ಕುರಿತು ರೋಟರಿ ಕ್ಲಬ್ ಆಫ್ ಹಾಸನ್ ಹೊಯ್ಸಳ ಅಧ್ಯಕ್ಷರು ಹಾಗೂ ರಂಗಭೂಮಿ ಕಲಾವಿದೆ ಪೂಜಾ ರಘುನಂದನ್ ಅವರು ಬರೆದ ತಮ್ಮದೆ ಬದುಕಿನ ಲೇಖನ ಇಲ್ಲಿದೆ.

ಮದರ್ಸ್ ಡೇ , ವುಮೆನ್ಸ ಡೇ ಎಷ್ಟು ಅದ್ಬುತ ಆಚರಣೆಗಳು. ಹೆಣ್ಣಿನ ದಿನ ಒಂದಿನ ಅಲ್ಲ ಪ್ರತಿ ಕ್ಷಣ ಅವಳ ದಿನವೇ… ಇಲ್ಲಿ ನಾ ಹೇಳಿಕ್ಕೆ ಹೊರಟಿದ್ದು ಯಾರದ್ದೋ ಕಥೆ ಅಲ್ಲ, ಯಾರದೋ ಉದಾಹರಣೆ ಅಲ್ಲ, ಯಾವುದೋ ಸಂಘಟನೆ ಮಾಡೋಣ ಅಂತ ಅಲ್ಲವೇ ಅಲ್ಲ. ಇದು ನನ್ನ ಕಥೆ. ಮದುವೆ ನಂತರದ ಹೆಣ್ಣಿನ ಭಾವುಕದ ಕಥೆ. ಯಾಕೆ ಈ ಕಥೆ ಈಗ ಅಂದರೆ, ಮೇ 8ರಂದು ವಿಶ್ವ ತಾಯಿಯಂದಿರ ದಿನ ಆಚರಿಸಲಾಯಿತು. ಇದಕ್ಕೆ ಇನಷ್ಟು ಅರ್ಥ ಬರಬಹುದು ಅನ್ನೊದು ನನ್ನ ಅನಸಿಕೆ. ಇನ್ನೂ ಮಿಕ್ಕಿದ್ದು ನಿಮ್ಮ ಭಾವನೆಗಳಿಗೆ ಬಿಟ್ಟಿದ್ದು.

ಹೆಣ್ಣು ಹೊನ್ನು ಮಣ್ಣು ಇವೆಲ್ಲವೂ ನಮ್ಮ ಹಣೆಯಲ್ಲಿ ಬರೆದಿದ್ದರೆ ಮಾತ್ರ ಅಂತ ದೊಡ್ಡವರು ಹೇಳುವ ವಾಡಿಕೆ ಇದೆ. ಕುಂದಾನಗರಿ  ಬೆಳಗಾವಿಯಲ್ಲಿ ಹುಟ್ಟಿ ಮಾಯಾನಗರಿ ಬೆಂಗಳೂರಿನಲ್ಲಿ ಆಗತಾನೆ ನೌಕರಿಗೆ ಸೇರಿದ್ದ ನಾನು ಉತ್ತರ ಕರ್ನಾಟಕದ ಮಗಳು. ಹಾಸನದ ರಘುನಂದನನೊಟ್ಟಿಗೆ ನನ್ನ ಲಗ್ನ ನಿಶ್ಚಯ ಆಯಿತು. 2012 ರಲ್ಲಿ ಹಾಸನದಲ್ಲಿ ಮದುವೆಯಾದೆ. ಮದುವೆ ನಂತರ  ಹೊಸ ಜೀವನ, ತುಂಬು ಕುಟುಂಬ. ಯಾವುದೇ ಕೆಲಸಕ್ಕೆ ಸೇರುವ ಯೋಚನೆ ನನ್ನಲ್ಲಿರಲಿಲ್ಲ. ಏಕೆಂದರೆ  ನಾ ಆಚೆ ಹೋದ್ರೆ ಮನೆಯವರು ಏನು ಅನ್ಕೊಳತ್ತಾರೆ ಗಾಢವಾಗಿ ಕಾಡುವ ಪ್ರಶ್ನೆ ಯಾಕೆಂದರೆ ನಾನು ಹೆಣ್ಣು ಅಲ್ಲವೇ.

ಹತ್ತಾರು ಹೊಸ ಸ್ನೇಹಿತರ ಭೇಟಿ, ನಾಲ್ಕಾರು ಕಾರ್ಯಕ್ರಮಗಳ ತಿರುಗಾಟದ ಮಧ್ಯೆ ಹೀಗೆ ಒಂದು ತಿಂಗಳು, ಎರಡು ತಿಂಗಳು, ಮೂರು ತಿಂಗಳು ಅಂತ ದಿನಗಳು ಕಳೆಯುತ್ತಾ ಹೋದದ್ದು ಗೊತ್ತಾಗಲೇ ಇಲ್ಲ. ಆಗ ಪ್ರಾರಂಭವಾಗಿದ್ದು ಗುಡ್ ನ್ಯೂಸ್ ಬಗ್ಗೆ. ಈ ಜನರಿಗೆ ಯಾಕೆ ಅಷ್ಟೊಂದು ಆಸಕ್ತಿ ಅಂತ ಗೊತ್ತಿಲ್ಲ. ಅವರಿಗೆ ಆಕ್ಚುಲ್ ಆಗಿ ಬೇಕಿರೋದು ಏನು ಅಂತ ನನಗೆ ಇದುವರೆಗೂ ಕಾಡುವ ಯಕ್ಷ ಪ್ರಶ್ನೆ ಸ್ವಾಮಿ. ಸಿಕ್ಕವರೆಲ್ಲರೂ ಕೇಳುವ ಒಂದೇ ಪ್ರಶ್ನೆ ಶುಭ ಸುದ್ದಿ ಏನು. ಏನು ಗುಡ್ ನ್ಯೂಸ್ ಎಂದು ಮಾತ್ರ.

ಇಷ್ಟರ ಮಧ್ಯೆ ನಾವು ಗುಡ್ ನ್ಯೂಸ್ ಗೆ ರೆಡಿಯಾಗಿ ಗುಡ್ ನ್ಯೂಸ್ ಕೊಟ್ಟಾಯ್ತು. ಅವತ್ತು ಸಂಜೆ ನಮ್ಮ ಅಮ್ಮ(ಅತ್ತೆ) ಅವರು ಬೊಂಡಾ, ಸ್ವೀಟ್ ಎಲ್ಲವನ್ನೂ ಮಾಡಿ ಖುಷಿ ಪಟ್ಟ್ರು. ನನ್ನ ಮೈದ್ನಾ ಅತ್ತಿಗೆ ನಾನು ಫುಲ್ ಹ್ಯಾಪಿ. ನಮ್ಮ ಮನೆಗೆ ಒಂದು ಪುಟ್ಟ ಪಾಪು ಬರುತ್ತೆ ಅಲ್ವ ಅಂದ. ಅವನ ಮುಖದಲ್ಲಿ ಆ ಖುಷಿ ನೋಡಿಯೇ ನನಗೆ ಕಣ್ಣಲ್ಲಿ ನೀರು. ಯಾಕೆಂದರೆ ಮನೆಗೆ ಒಂದು ಪುಟ್ಟ ಕಂದಾ ಬರುತ್ತೆ ಅಂದರೆ ಎಷ್ಟು ಲವಲವಿಕೆ. ಆ ಒಂಬತ್ತು ತಿಂಗಳ ಕಾತುರದ ಕಾಯುವಿಯಿಕೆಗೆ ಕ್ಷಣಗಣನೆ ಅಲ್ಲಿಂದಲೇ ಆರಂಭವಾಯಿತು. ಎಲ್ಲವೂ ತಾಯ್ತನದ ಬದಲಾವಣೆ. ತನ್ನ ಪುಟ್ಟವಾದ ಆ ಗರ್ಭ ಚೀಲದಲ್ಲಿ ತನ್ನ ಕಂದಮ್ಮನನ್ನು ರಕ್ಷಿಸುತ್ತಾ, ಹಲವಾರು ಕನಸುಗಳನ್ನು ಕಾಣುತ್ತಾ ಮೂಡ್ ಸ್ವಿಂಗ್ ಅದ್ರೂ, ಇಷ್ಟವಾದ ಆಹಾರವನ್ನು ತ್ಯಜಿಸಿ ಇಷ್ಟವಾದ ಉಡುಗೆ ಬಿಟ್ಟು ತನ್ನ ದೇಹವನ್ನೇ ಆ ಜೀವಕ್ಕೆ ಮುಡಿಪಾಗಿ ಇಡ್ತಾಳೆ. ಬಹು ಶಿಸ್ತಿನಿಂದ ಮಲಗಿ ಏಳುವ ಅಭ್ಯಾಸವನ್ನು ರೂಢಿ ಮಾಡ್ಕೊಳತಾಳೆ. ನಾನು ಸಹ ಇದಾವುದಕ್ಕೂ ಹೊರತಾಗಿರಲಿಲ್ಲ.

ಆ ನಗು ಆ ಖುಷಿಯ ವಾತಾವರಣ ಎಲ್ಲವೂ ಕೇವಲ 2 ತಿಂಗಳಲ್ಲಿ ನನ್ನಿಂದ ಜಾರಿಹೋಯಿತು. ನನ್ನ ಪಾಪು ನನ್ನ ರಿಪ್ಲೆಕ್ಷನ್  ಅದಕ್ಕೂ ಹೃದಯ ಬಡಿತ ಪ್ರಾರಂಭವಾಗಿತ್ತು. ಪುಟ್ಟ ಪುಟ್ಟ ಕೈ ಕಾಲು ಮೂಡುವ ಸಮಯದಲ್ಲಿ ನನ್ನ ಮಗುವಿನ ಹೃದಯದ ಬಡಿತ ನಿಂತಿತ್ತು. ನನ್ನ ಹೊಟ್ಟೆಯಲ್ಲಿದ್ದ ಮಗು ಮಾಂಸರೂಪದಲ್ಲಿ ಜಾರಿ ಬಿದ್ದಿತ್ತು. ಅದನ್ನ ನಾನು ಇದುವರೆಗೂ ಮಾಂಸದ ಮುದ್ದೆ ಅನ್ನಲು ಸಾಧ್ಯವಿಲ್ಲ. ಆ ಕ್ಷಣ ಆ ಮಗು ನನ್ನ ಅಮ್ಮಾ ಅಮ್ಮಾ ಎಂದು ನನ್ನನ್ನು ಬಚ್ಚಲ ಮನೆಯಲ್ಲಿ ಝೇಂಕರಿಸುವ ಶಬ್ಧ ನನ್ನನ್ನ ಆವರಿಸಿದಂತಿತ್ತು. ಬಚ್ಚಲ ಮನೆಯ ತುಂಬೆಲ್ಲ ರಕ್ತದ ವಾಸನೆಯಾದರೆ ನನ್ನ ಹೊಟ್ಟೆ ನೋವಿನ ಕಥೆ ಇನ್ನೊಂದೆಡೆ. ಇದರ ಮಧ್ಯೆ ಮನಸ್ಸಿನ ನೋವು ಹೇಳತೀರದು. ಮೂರು ತಿಂಗಳು ಗರ್ಭದಲ್ಲಿದ್ದ ಮಗು ಜಾರಿ ಬಿಳುವ ನೋವು  ಅಮ್ಮನಾದ ನನಗೆ ಮಾತ್ರ ಗೊತ್ತು.

ಇಂತಹ ಕಷ್ಟ ನನಗೆ ಸರಿಯಾಗಿ 6 ಸಾರಿ ಗರ್ಭ ತೊಳಸಿದ್ದು. ಅದಾಗಿನೇ ಹೋಗಿದ್ದು. ಅಷ್ಟು ಮಕ್ಕಳು ಹುಟಿದ್ರೆ ಈವಾಗ ಸರಿಯಾಗಿ 6 ಮಕ್ಕಳ ತಾಯಿ ನಾನು. ಈ ಮಧ್ಯೆ ಎಷ್ಟೋ ಟ್ರೀಟ್ಮೆಂಟ್ ಎಷ್ಟೋ ಹರಕೆ. ಎಲ್ಲ ಪ್ರಯೋಗ ನನ್ನ ದೇಹದ ಮೇಲೆ ಆಗಿತ್ತು. ವಿವಿಧ ರೀತಿಯ ಔಷಧಿ ಪ್ರಕಾರಗಳು, ವಿವಿಧ ಪ್ರಯೋಗಗಳು, ವಿವಿಧ ಚಿಕಿತ್ಸೆಗಳು, ಹೆಮೆಟಾಲಜಿ, ಕ್ರೋಮೋಸೋಮ್ ಟೆಸ್ಟ್, ಜೆನೆಟಿಕ್ ಟೆಸ್ಟ್ ನಂತಹ ಉನ್ನತ ಮಟ್ಟದ ಪರೀಕ್ಷೆಗಳನ್ನು ನಡೆಸಿದಾಗಲೂ ಸಹ ಯಾವುದೇ ರೀತಿಯ ದೋಷಗಳು ಕಂಡು ಬರಲಿಲ್ಲ. ಆದರೂ ತಾಯ್ತನದ ಭಾಗ್ಯ ಮಾತ್ರ ನನ್ನದಾಗುತ್ತಿರಲಿಲ್ಲ. ಮತ್ತೆ ಮತ್ತೆ ನನಗೆ ನೋವುಗಳು ಮರು ಕಳಿಸುತ್ತಿದ್ದದ್ದು, ಇಷ್ಟೇ ಅಲ್ಲದೇ ನಾನು ಆಯುರ್ವೇದ ಔಷಧಿ ಮತ್ತು ನಾಟಿ ಗಿಡಮೂಲಿಕೆ ಔಷಧಿ ಹೀಗೆ ಹಲವಾರು ರೀತಿಯಲ್ಲಿ ಹಲವಾರು ಪ್ರತಿಷ್ಠಿತ ಆಸ್ಪತ್ರೆ ಪ್ರತಿ ದಿನ ಔಷಧಿ ಇಂಜೆಕ್ಷನ್. ಹೀಗೆ ಸಾಗತಾ ಇತ್ತು.

ಪ್ರತಿದಿನ ಹತ್ತಾರು ಮಾತ್ರೆಗಳನ್ನು ತೆಗೆದುಕೊಂಡರೂ ಸಹ ಒಮ್ಮೆಯೂ ಸಹ ನನ್ನ ತಾಯ್ತನ 2 ತಿಂಗಳನ್ನು ದಾಟುತ್ತಿರಲಿಲ್ಲ. ಪ್ರತೀ ಬಾರಿಯೂ ನಲವತ್ತೈದನೇ ದಿನಕ್ಕೆ ಸರಿಯಾಗಿ ಹೃದಯಬಡಿತ ಗೋಚರಿಸುವಾಗ ಪಡುತ್ತಿದ್ದ ಸಂತಸ ಎರಡನೇ ತಿಂಗಳ ಸ್ಕ್ಯಾನಿಂಗ್ ನಲ್ಲಿ ಅಂಧಕಾರದಲ್ಲಿ ಲೀನವಾಗುತ್ತಿತ್ತು. ಅಮ್ಮ ಅನಸ್ಕೊಳೋದು ಅಷ್ಟು ಸುಲಭಾ ಅನ್ಕೊಂಡ್ರಾ… ಅದಕ್ಕೆ ಅನ್ನೊದು ತಾಯಿಗಿಂತ ದೇವರಿಲ್ಲ ಅಂತ.

ನನ್ನ ಆತ್ಮೀಯ ಸ್ನೇಹಿತೆ ಒಬ್ಬಳು ನನಗೆ ಮಗು ಮಾಡಿ ಕೊಡ್ತೀನಿ ಕಣೇ ನೀನೆ ಅದರ ಅಮ್ಮ ಆಗು ಅಂತ ಮಾತು ಕಥೆಗಳು ಸಹ ನಡೆಯಿತು. ಯಾವುದನ್ನ ನಂಬಲಿ ಯಾವುದನ್ನ ಬಿಡಲಿ. ಆತ್ಮೀಯ ಸ್ನೇಹಿತೆ, ನಮ್ಮವರದೇ ಅನ್ನೊದು ಒಂದು ಬಂತು. ಆ ಕ್ಷಣಕ್ಕೆ ಎಲ್ಲವೂ ಸರಿ ಇತ್ತು. ಮತ್ತೆ ಆ ಪ್ರಕ್ರಿಯೆ ಮುಂದುವರಿಯಲೇ ಇಲ್ಲ. ಆ ಮಾತುಗಳು ಅಲ್ಲಿಯೇ ಮೌನವಾದವು. ಈ ಕುರಿತಾದ ವಿಷಯಗಳನ್ನು ಮತ್ತೊಮ್ಮೆ ಅವಳೊಡನೆ ಮಾತನಾಡುವ ಮನಸ್ಸು ನನಗಾಗಲಿಲ್ಲ.

ಇಷ್ಟೇಲ್ಲಾ ಆಯ್ತಲ್ಲ. ಕಷ್ಟ, ನೋವು, ಹಿಂಸೆ , ಜನರ ಪ್ರಶ್ನೆ. ಎಲ್ಲವನ್ನೂ ದಾಟಿ ನಮ್ಮ ಮನೆಯಲ್ಲಿ ಒಂದು ಗಟ್ಟಿ ನಿರ್ಧಾರವನ್ನು ಮಾಡಿದ್ವಿ. ಅದರಲ್ಲೂ ಒಂದು ಹೆಣ್ಣು ಮಗುವನ್ನೇ ದತ್ತು ತೆಗೆದುಕೊಳ್ಳಬೇಕೆಂಬ ಅಚಲವಾದ  ನಿರ್ಧಾರ ನಮ್ಮದಾಯಿತು. ನಾವು ಮಗುವನ್ನು ದತ್ತು ತೆಗೆದುಕೊಳ್ಳುವ ಮೂಲಕ ನಾನು ಅಮ್ಮ ಆಗಲು, ರಘು ತಂದೆ ಆಗಲು, ಅತ್ತೆ-ಮಾವ ಮೈದನಾ ವಾರಗಿತ್ತಿ ಶ್ರೀದೃತ್ ಎಲ್ಲರೂ ಅಜ್ಜ-ಅಜ್ಜಿ, ಚಿಕ್ಕಪ್ಪ-ಚಿಕ್ಕಮ್ಮ, ಅಣ್ಣ ಆಗಲು ನಿರ್ಧಾರ ಮಾಡಿದ್ವಿ. ಈ ನಿರ್ಧಾರ ಮಾಡಿದಾಗ ನನ್ನ ವಯಸ್ಸು26, ರಘುವಿನ ವಯಸ್ಸು 30. ನಾವು ಮದುವೆಯಾಗಿ ಕೇವಲ 6 ವರ್ಷಗಳಾಗಿದ್ದವು. ಸುಮ್ಮನೆ ಪ್ರಯತ್ನ ಪಡುತ್ತಾ ಕಾಲಹರಣ ಮಾಡಿ ಮುಂದೆಂದೋ ದತ್ತು ಸ್ವೀಕಾರದ ನಿರ್ಧಾರ ಮಾಡುವ ಮೊದಲು ಈಗಲೇ ನಿರ್ಧಾರ ತೆಗೆದುಕೊಂಡರೆ ಮುಂದಿನ ಜೀವನ ಸುಖಮಯವಾಗಿರುತ್ತದೆ ಅಲ್ಲವೇ ಎಂಬ ಆಲೋಚನೆಯಿಂದ ನಾವು ಈ ಒಳ್ಳೆಯ ನಿರ್ಧಾರಕ್ಕೆ ಬಂದಂತಾಯ್ತು.

ಮತ್ತೆ ಇದೇ ಜನರ ಪ್ರಶ್ನೆ. ಯಾಕೇ ಇಷ್ಟು ಬೇಗ ನೀವು ಈ ನಿರ್ಧಾರವನ್ನು ತೆಗೆದುಕೊಂಡಿರಿ. ಕಾಯಬೇಕಿತ್ತು ಎಂಬುದು. ಅಲ್ಲಿ ಇಲ್ಲಿ, ಹಾಗೇ ಹೀಗೆ, ಆ ಡಾಕ್ಟರ್, ಈ ಡಾಕ್ಟರ್, ದೇವರು, ಹರಿಕೆ, ನಾಟಿ ಔಷಧಿ, ಪಥ್ಯ, ಹೊಸ ಹೊಸ ತಂತ್ರಜ್ಞಾನದ ವಿಷಯಗಳು ಹೀಗೆ ಹತ್ತು ಹಲವಾರು ವಿಷಯಗಳು ಮತ್ತೆ ಮರುಕಳಿಸಿ ತೊಡಗಿದಾಗ ಅಬ್ಬಬ್ಬಾ ಪ್ಲೀಜ್ ಸ್ಟಾಪ್ ಆಲ್ ದೀಸ್ ಅಂತ ಒಮ್ಮೆ ನಾನು ತಿರುಗಿ ಬಿದ್ದೆ. ಅಲ್ಲಿಗೆ ಈ ಜನರ ಬಾಯಿ ಮುಚ್ಚಿ ಹೋಯಿತು. ಮನೆಯವರ ಗಟ್ಟಿ ನಿರ್ಧಾರ ನನ್ನನ್ನು ಹಾಗೂ  ರಘುನಾ ಇನ್ನೂ ಗಟ್ಟಿಯಾಗಿ ಮಾಡ್ತು. ಜನರ ಬಾಯಿಗೆ ಬೀಗ ಹಾಕುವ ಹಾಗೇ ಉತ್ತರ ಕೊಟ್ವಿ. ಕೇಳಿದವರಿಗೆಲ್ಲರಿಗೂ ನಾವು ತೆಗೆದುಕೊಂಡಿರುವ ನಿರ್ಧಾರದ ಹಿಂದಿರುವ ಸತ್ಯಗಳು ಹಾಗೂ ಅದರಿಂದ ಆಗುವ ಅನುಕೂಲಗಳ ಬಗ್ಗೆ ಮನಮುಟ್ಟುವಂತೆ ಯಾವುದೇ ಸಂಕೋಚವಿಲ್ಲದೆ ವಿವರಿಸತೊಡಗಿದೆವು. ಇದು ನನ್ನನ್ನು ಮತ್ತಷ್ಟು ಗಟ್ಟಿಯಾಗುವಂತೆ ಮಾಡತೊಡಗಿತು ಹಾಗೂ ನನ್ನ ನಿರ್ಧಾರ ಸರಿ ಇದೆ ಎನಿಸತೊಡಗಿತು.

ಕಾನೂನು ಪ್ರಕಾರ ದತ್ತು ಸ್ವೀಕಾರಕ್ಕೆ ಏಕೈಕ ಮಾರ್ಗವಾದ CARA  ವೆಬ್ ಸೈಟ್ ಮೂಲಕ ದತ್ತು ಪ್ರಕ್ರಿಯೆಗೆ ನೋಂದಣಿ ಮಾಡಿ ನಮ್ಮ ಮಗಳ ಬರುವಿಕೆಗೆ ಮುನ್ನುಡಿ ಬರೆದವು. ಎರಡು ವರ್ಷ ಕಾಯಬೇಕಿತ್ತು. ಕಾದ್ವಿ. ಲಿಗಲ್ ಅಡಾಪ್ಷನ್ ಅನ್ನೋದು ಸುಲಭವಾದ ವಿಧಾನ ಗೊತ್ತಿದ್ದವರಿಗೆ ಮಾತ್ರ. ಪಾಪ ಓದು ಬರಹ ಬರದೆ ಇರುವವರಿಗೆ ಇದು ಕಬ್ಬಿಣದ ಕಡಲೆ. ನಾವು ಈ ವಿಚಾರದ ಕುರಿತಾಗಿ ಅರಿತವರ ಬಳಿ ಸರಿಯಾಗಿ ವಿಷಯವನ್ನು ಮನನ ಮಾಡಿಕೊಂಡಿದ್ದರಿಂದ ನಮಗೆ ಈ ಪ್ರಕ್ರಿಯೆ ಬಹಳ ಸುಲಭವೇ ಆಯಿತು ಎನ್ನಬಹುದು. ಸಾಮನ್ಯವಾಗಿ ಎಲ್ಲರೂ ಹೇಳ್ತಾರೆ ನೀವು ದತ್ತು ತೊಗಳಬೇಕಾದ್ರೆ ನಿಮ್ಮ ಆಸ್ತಿಯನ್ನು ಆ ಮಗುವಿನ ಹೆಸರಿಗೆ ಆಗಬೇಕು ಅಂತ. ಆದ್ರೆ ಈ ತರಹದ ರೂಲ್ಸ್ ದತ್ತು ಪ್ರಕ್ರಿಯೆಯಲ್ಲಿ ಇಲ್ಲ. ಆದ್ರೆ ತಂದೆಯ ವರಮಾನವನ್ನು ನೋಡ್ತಾರೆ. ಯಾಕೆಂದರೆ ಆ ಕುಟುಂಬಕ್ಕೆ ಮಗುವಿನ ಪೋಷಣೆ ಮಾಡಲು ಅಗುತ್ತಾ ಅಂತ. ಈಗಾಗಲೇ ಅದು ಅನಾಥವಾಗಿ ಆಶ್ರಮದಲ್ಲಿ ಬಂದಿರುತ್ತೆ. ಮತ್ತೊಮ್ಮೆ ಅದಕ್ಕೆ ತೊಂದರೆಯಾಗಬಾರದಲ್ಲವೇ. ಹಾಗಾಗಿ ಸರಕಾರ ಮುಂದಾಲೋಚನೆಯಲ್ಲಿ ಕೆಲವೊಂದು ನಿಮಯ ಷರತ್ತುಗಳನ್ನು ಹಾಕಲಾಗುತ್ತೆ.

ದತ್ತು ಪ್ರಕ್ರಿಯೆಗೆ ನೋಂದಣಿ ಮಾಡಿಸಿದ ಸುಮಾರು ಎರಡೂವರೆ ವರ್ಷಗಳ ಕಾಲದ ನಂತರ ನಮ್ಮ ಮನೆಯ ಮಗು ನಮ್ಮ ಮನೆಗೆ ಆಗಮಿಸುವ ಸಂದೇಶ ನಮಗೆ ಬಂದಾಗ ಮನೆಯವರ ಸಂತಸ ಹೇಳತೀರದು. ಇನ್ನೇನು ಕೆಲವೇ ದಿನಗಳಲ್ಲಿ ನನ್ನ ಮಗಳು ನನ್ನ ಮನೆಗೆ ಬರುತ್ತಾಳೆ ಎಂಬ ಸಂತಸದಲ್ಲಿದ್ದ ಸಮಯದಲ್ಲಿಯೂ ಸಹ ನನ್ನ ಪರಿಚಯಸ್ಥರೊಬ್ಬರು “ಇನ್ನೂ ಸಮಯವಿದೆ ಯೋಚಿಸಿ ಒಂದು ದೇವಸ್ಥಾನದಲ್ಲಿ ಹರಕೆ ಮಾಡಿಕೊಂಡರೆ ನಿಮ್ಮದೇ ಮಗುವನ್ನು ಪಡೆಯಬಹುದು” ಎಂಬ ಆಲೋಚನೆಯನ್ನು ನಮ್ಮಲ್ಲಿ ಬಿತ್ತಲು ಮುಂದಾದಾಗ, ನಾನು ಅವರಿಗೆ ಹೇಳಿದ ಒಂದೇ ಮಾತು ಅದೇ ದೇವರ ಅನುಗ್ರಹದಿಂದ ನನ್ನ ಮಗಳು ಇನ್ನೇನು ನಾಲ್ಕಾರು ದಿನಗಳಲ್ಲಿ ಮನೆಗೆ ಬರುತ್ತಿದ್ದಾಳೆ ಎಂದು.

ಎಷ್ಟೋ ಜನರಿಗೆ ನಮ್ಮ ರಕ್ತದಿಂದಾಚೆ ಯೋಚನೆ ಮಾಡುವ ದಾರಿ ಸಹ ನೋಡಿರಲ್ಲ. ಆ ರೀತಿಯಲ್ಲಿ ಆದ್ರೆ ಆ ಮಗು ನಮ್ಮ ರಕ್ತ ಅಲ್ಲದಿದ್ರು ಅದು ನನಗಾಗಿಯೇ ಈ ಭೂಮಿಗೆ ಬಂದಿದೆ. ಆ ಮಗುವಿಂದನೇ ನಾವು ಅಮ್ಮ ಅಪ್ಪ ಅಂತ ಕರೆಸಿಕೊಳ್ಳುವ ಸೌಭಾಗ್ಯ ನಮ್ಮದಾಗಿರುತ್ತೆ. ಇದನ್ನ ನಾವು ಬಹು ಸೂಕ್ಷ್ಮವಾಗಿ ಗಮನಿಸಿದಾಗ ಇಲ್ಲಿ ಆಧ್ಯಾತ್ಮಿಕತೆ ಗೋಚರವಾಗುದಂತು ಸತ್ಯ. ಅದಕ್ಕೆ ನಾವೇ ಉದಾಹರಣೆ. ನಮ್ಮ ಮನೆಯಲ್ಲಿ ಯತಿಗಳ ಆಗಮನ, ಗುರುಹಿರಿಯರ ಒಡನಾಟ ನಮ್ಮ ಕುಟುಂಬಕ್ಕೆ ಬಹಳ ಇದೆ. ಅದೇ ರೀತಿಯಲ್ಲಿ ನಮ್ಮ ಮಗು ಸಹ ಮುರುಘಾ ಮಠದಲ್ಲಿ ಶ್ರೀಗಳವರ ಹಸ್ತಗಳಿಂದ ಮೂರು ತಿಂಗಳು ಅವರ ಆರೈಕೆಯಲ್ಲಿ ಬೆಳದ ಕಂದ ಇಂದು ನನ್ನ ಮಡಿಲು ಸೇರಿದೆ. ಆ ಮಗು ನನ್ನ ಮಡಿಲು ಸೇರಿದಾಗ ಅದಕ್ಕೆ ಮೂರುವರೆ ತಿಂಗಳು. ಅವಳ ಆಗಮನವನ್ನು ಅವಳ ಚಿಕ್ಕಪ್ಪ-ಚಿಕ್ಕಮ್ಮ, ಅಣ್ಣ ಎಷ್ಟು ಅದ್ದೂರಿಯಾಗಿ ಮಾಡಿದ್ರು ಅಂದರೇ, ಅತ್ಯಂತ ವೈಭವೋಪೇತವಾಗಿ ನಾದಸ್ವರ ಸಂಗೀತ ಸಮೇತ, ಹೂಗಳ ಸುರಿಮಳೆ, ಬಣ್ಣ ಬಣ್ಣದ ರಂಗೋಲಿ ಚಿತ್ತಾರ.. ಅವಳ ಅಣ್ಣ ಶ್ರೀದೃತ್ ಅವಳಿಗೆ ಗುಲಾಬಿ ಹೂ ಕೊಟ್ಟು ತಂಗಿ ಪಾಪ ಬಂದ್ಲು ನಮ್ಮಮನೆಗೆ ಅಂತ ಸ್ವಾಗತವನ್ನು ಮಾಡಿದ್ದು ಇನ್ನೂ ನನ್ನ ಕಣ್ಣಿಗೆ ಕಟ್ಟಿದ ಹಾಗಿದೆ. ಇಂದು ಅವಳಿಗೆ ಒಂದುವರೆ ವರ್ಷ.

ಈ ಜನರೇಶನ್ ಅಬ್ಬಬ್ಬ.. ಸಾಫ್ಟ್ ವೇರ್ ಕಂಪೆನಿಗಳಲ್ಲಿ, ಗಾರ್ಮೆಂಟ್ ಕೆಲಸದಲ್ಲಿ, ಅನೇಕ ವೃತ್ತಿಗಳಲ್ಲಿ ಕೆಲಸ ಮಾಡುವವರು, ವರ್ಕಿಂಗ್ ವುಮೆನ್ಸ್ , ಕಲಾವಿದರು ಹೀಗೆ ಒಂದಾ ಎರಡಾ ಎಲ್ಲದರಲ್ಲೂ ನಾವು ಮುಂದೂ ಎಂದರೂ ಈ ತಾಯ್ತಾನ ಅಂತಾ ಬಂದಾಗ ಹೆಣ್ಣು ಅನುಭವಿಸುವ ನೋವಿಗೆ ಸರಿಸಾಟಿಯಿಲ್ಲ. ಗಂಡಾಗಲಿ ಹೆಣ್ಣಾಗಲಿ ಇಬ್ಬರು ಸಮಾನರು ಅಂದಾಗ ಇಬ್ಬರು ಒಂದು ಜೀವಕ್ಕೆ ಸಾಕ್ಷಿಯಾಗುವ ಕ್ಷಣವನ್ನು ಅತೀ ಸುಂದರವಾಗಿ ಅನುಭವಿಸಬೇಕು. ಆವಾಗಲೇ ಪವಿತ್ರವಾದ ಜೀವ ಮತ್ತು ಜೀವನ ಜೊತೆ ಆಗುತ್ತೆ. ಅದು ನಮ್ಮದಾದರೂ ಸರಿ. ನಮಗೆ ಸಾಧ್ಯವಾಗದಿದ್ದರೆ ನಮಗಾಗಿಯೇ ಹುಟ್ಟಿರುವ ಬೇರೊಂದು ಮಗುವಿನಿಂದ ಆದರೂ ಸರಿ.

ಇಂದಿಗೂ ಸಹ ನನ್ನಂತಹ ನೂರಾರು  ಮಹಿಳೆಯರು ಮಕ್ಕಳ ವಿಚಾರದಲ್ಲಿ ಗೊಂದಲದಲ್ಲಿದ್ದು ಚಿಕಿತ್ಸೆ ಫಲಕಾರಿಯಾಗದೆ ನೋವನ್ನನುಭವಿಸುತ್ತ ಮತ್ತೆಮತ್ತೆ ಚಿಕಿತ್ಸೆಗೆ ಒಳಗಾಗುತ್ತಿರುವ ಸಂದರ್ಭದಲ್ಲಿ ದತ್ತು ಪ್ರಕ್ರಿಯೆಯ ಬಗ್ಗೆ ಮನಸ್ಸು ಮಾಡುವುದು ಒಳಿತಲ್ಲವೇ. ಒಂದೊಮ್ಮೆ ನೀವೇನಾದರೂ ದತ್ತು ಪ್ರಕ್ರಿಯೆಯ ಬಗ್ಗೆ ಆಸಕ್ತಿ ಹೊಂದಿ ಅದರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಪಡೆಯಬೇಕಾದರೆ ನನ್ನನ್ನು ಯಾವ ಕ್ಷಣದಲ್ಲಿ ಬೇಕಾದರೂ ಸಂಪರ್ಕಿಸಬಹುದು ನಾನು ನಿಮ್ಮೊಂದಿಗಿದ್ದೇನೆ.

ಇಂತೀ

ಪೂಜಾ ರಘುನಂದನ್, ಅಧ್ಯಕ್ಷರು, ರೋಟರಿ ಕ್ಲಬ್ ಆಫ್ ಹಾಸನ್ ಹೊಯ್ಸಳ, ಹಾಸನ. ಮೊಬೈಲ್ ಸಂಖ್ಯೆ 9986078790.




Leave a Reply

Your email address will not be published. Required fields are marked *

error: Content is protected !!