ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ
ಹುಬ್ಬಳ್ಳಿ: ಹಿರಿಯ ಸಾಹಿತಿ ಡಾ.ಸಂಗಮೇಶ ಹಂಡಿಗಿ(84) ಮಂಗಳವಾರ ನಿಧನರಾಗಿದ್ದಾರೆ. ವಿದ್ಯಾನಗರದ ಶಿರೂರ ಪಾರ್ಕ್ ನಲ್ಲಿರುವ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೂಲತಃ ನವಲಗುಂದದವರಾಗಿದ್ದು, ಹುಬ್ಬಳ್ಳಿಯಲ್ಲಿ ನೆಲೆಸಿದ್ದರು.
ಕನ್ನಡ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ ಇವರು, ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. ಹಂಪಿ ಕನ್ನಡ ವಿವಿಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಪಿ.ಹೆಚ್ ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದರು. ದಶ ಧರ್ಮ, ನುಡಿ-ಮಿಡಿ, ವಚನ ಮಯೂರ, ನೆನದವರ ಮನದಲ್ಲಿ, ವಚನಸ್ತವನ, ಶರಣಾನುಭವ, ಜನಪದ ಸಾಹಿತ್ಯ ಸೇರಿದಂತೆ 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
2006ರಲ್ಲಿ ಸಕಲೇಶಪುರದಲ್ಲಿ ನಡೆದ 2ನೇ ವಚನ ಸಾಹಿತ್ಯ ಸಮ್ಮೇಳನದಲ್ಲಿ ವಚನಶ್ರೀ ಪ್ರಶಸ್ತಿ ನೀಡಲಾಗಿದೆ. 1994ರಲ್ಲಿ ಬಸವನ ಬಾಗೇವಾಡಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ, 1999ರಲ್ಲಿ ವಿಜಯಪುರ ತಾಲೂಕಿನ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಂಡಿದ್ದರು.