ಬೆಳಗಾವಿ/ಬಳ್ಳಾರಿ: ಇವತ್ತಿನ ದುನಿಯಾದಲ್ಲಿ ನಾನು ಪದವಿ ಮಾಡಿದ್ದೀನಿ. ಡಬಲ್ ಡಿಗ್ರಿ ಮಾಡಿದ್ದೀನಿ. ನಾನು ಸಣ್ಣಪುಟ್ಟ ಕೆಲಸ ಮಾಡಲ್ಲ. ಕೃಷಿ ಕೆಲಸ ನಾನ್ಯಾಕೆ ಮಾಡ್ಬೇಕು ಅನ್ನೋ ಯುವಕರ ನಡುವೆ, ಮಾರುತಿ ಅನ್ನೋ ಯುವಕರ ವಿಭಿನ್ನವಾಗಿ ಕಾಣಿಸಿಕೊಳ್ತಾರೆ.
ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದ ಮಾರುತಿ ಮರಡಿ ಮೌರ್ಯ ಎಂಬಿಎ ಪದವಿ ಪಡೆದು, 2 ವರ್ಷಗಳ ಕಾಲ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದವರು. ಬಳಿಕ ಅಲ್ಲಿಂದ ಸೀದಾ ಹೊರ ನಡೆದು ಕೃಷಿಯಲ್ಲಿ ತೊಡಗಿಸಿಕೊಂಡ್ರು. ಕುರಿ, ಕೋಳಿ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡ್ರು. ಇದು ಅವರಿಗೆ ಕೈ ಹಿಡಿಯಿತು.
ಪಶು ಸಾಕಾಣಿಕೆಯಲ್ಲಿ ಲಾಭ ಪಡೆಯುತ್ತಿರುವ ಮಾರುತಿ, ಅನೇಕ ಕೃಷಿ ಮೇಳಗಳಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದ್ದಾರೆ. ಸಂಘ ಸಂಸ್ಥೆಗಳಿಂದ ಪ್ರಶಸ್ತಿಗಳು ಬಂದಿವೆ. ಇದೀಗ ರಾಜ್ಯ ಸರ್ಕಾರದಿಂದ 2020ನೇ ಸಾಲಿನ ರಾಜ್ಯ ಮಟ್ಟದ ‘ಶ್ರೇಷ್ಟ ಪಶುಪಾಲಕ’ ಪ್ರಶಸ್ತಿ ಸಿಕ್ಕಿದೆ.
ಬೀದರನಲ್ಲಿ ನಡೆದ ರಾಜ್ಯ ಮಟ್ಟದ ಪಶುಮೇಳ 2020 ರಲ್ಲಿ ಮಾರುತಿ ಸಾಧನೆಯನ್ನ ಗುರುತಿಸಿ ಪ್ರಶಸ್ತಿ ನೀಡಿದ್ದು, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ನೌಕರಿ ಇದ್ದರೆ ಜೀವನ ಅನ್ನೋ ಅದೆಷ್ಟೋ ಜನರಿಗೆ ಇಂಥವರು ಮಾದರಿಯಾಗಬೇಕು.