ಪ್ರಜಾಸ್ತ್ರ ಸಿನಿಮಾ
ಸ್ಯಾಂಡಲ್ ವುಡ್ ಅಂಗಳದಲ್ಲಿ ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡುವೆ ಒಂದೊಳ್ಳೆ ಸ್ನೇಹವಿತ್ತು. ಇವರಿಬ್ಬರು ವಿಷ್ಣು-ಅಂಬಿ ತರದಂತೆ ಎಲ್ಲೆಡೆ ಕಾಣಿಸಿಕೊಂಡಿದ್ದರು. ಸುದೀಪ್ ವಿಷ್ಣುವರ್ಧನ್ ಅವರ ಅಭಿಮಾನಿಯಾದರೆ, ದರ್ಶನ್ ಅಂಬರೀಶ್ ಕುಟುಂಬದವರೊಂದಿಗೆ ಬಾಂಧವ್ಯ ಹೊಂದಿದ್ದಾರೆ. ಆದರೆ, ಈ ಜೋಡಿ ನಡುವೆ ಯಾವಾಗ, ಯಾವ ಕಾರಣಕ್ಕೆ ಬಿರುಕು ಮೂಡಿತು ಗೊತ್ತಿಲ್ಲ. ಸುಮಾರು 5 ವರ್ಷಗಳಿಂದ ದೂರ ದೂರ ಇದ್ದಾರೆ.
ಇತ್ತೀಚೆಗೆ ಹೊಸಪೇಟೆಯಲ್ಲಿ ಕ್ರಾಂತಿ ಚಿತ್ರದ ಹಾಡು ಬಿಡುಗಡೆ ವೇಳೆ ದರ್ಶನ್ ಮೇಲೆ ಚಪ್ಪಲಿ ಎಸೆಯಲಾಗಿತ್ತು. ಇದನ್ನು ಖಂಡಿಸಿ ಸುದೀಪ್ ಭಾವನಾತ್ಮಕ ಸಂದೇಶ ಟ್ವೀಟ್ ಮಾಡಿದ್ದರು. ಇದಕ್ಕೆ ದರ್ಶನ್ ಸಹ ಪ್ರತಿಕ್ರಿಯೆ ನೀಡಿದ್ದರು. ಆಗ ಇಬ್ಬರ ಫ್ಯಾನ್ಸ್ ಗಳಲ್ಲಿ ಒಂದಿಷ್ಟು ಆಸೆ ಮೂಡಿತ್ತು.
ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸೆಲ್ಫಿ ಫೋಟೋವೊಂದು ಹರಿದಾಡುತ್ತಿದೆ. ಸುದೀಪ್, ದರ್ಶನ್ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರದ್ದು. ಇದನ್ನು ನೋಡಿದ ಇಬ್ಬರ ನಟರ ಫ್ಯಾನ್ಸ್ ಒಂದು ಕ್ಷಣ ನಂಬಲು ಆಗದಂತಾಗಿದೆ. ಇದು ರಿಯಲ್ ಅಥವ ರೀಲ್ ಎಂದು ಪ್ರಶ್ನಿಸುತ್ತಿದ್ದಾರೆ. ಅಸಲಿಗೆ ಇದು ರಿಯಲ್ ಫೋಟೋ ಅಲ್ಲ. ಅಭಿಮಾನಿಗಳು ಎಡಿಟ್ ಮಾಡಿರುವ ಫೋಟೋ ಆಗಿದೆ. ಅದೇನೆ ಇರಲಿ ಇವರಿಬ್ಬರು ಒಂದಾಗಬೇಕು ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ಕ್ರಾಂತಿ ಚಿತ್ರದ ಟ್ರೇಲರ್ ಗೆ ಸುದೀಪ್ ಕರೆಸಬೇಕು ಎಂದು ಸ್ವತಃ ಡಿ ಬಾಸ್ ಫ್ಯಾನ್ಸ್ ಕೇಳುತ್ತಿದ್ದಾರೆ. ಈ ಕುರಿತು ನಟರಿಬ್ಬರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಜನವರಿ 7ರಂದು ಟ್ರೇಲರ್ ರಿಲೀಸ್ ಆಗುತ್ತಿದೆ. ಈ ವೇಳೆ ಏನಾದರೂ ಮ್ಯಾಜಿಕ್ ಆಗುತ್ತಾ ಅನ್ನೋ ಕುತೂಹಲವಿದೆ. ಇದಕ್ಕೆ ನಾಳೆವರೆಗೂ ಕಾಯಬೇಕಿದೆ.