ಸಿಂದಗಿ: ಪಟ್ಟಣದಲ್ಲಿ ನಿನ್ನೆ ಮಧ್ಯರಾತ್ರಿ ಭರ್ಜರಿ ಕಳ್ಳತನ ನಡೆದಿದೆ. ಪಟ್ಟಣದ ಮೊರಟಗಿ ರಸ್ತೆ ಹಾಗೂ ಶಂಕರ ಬಡಾವಣೆಯಲ್ಲಿನ ಮನೆಗಳಲ್ಲಿ ಕಳ್ಳತನ ನಡೆದಿದೆ. ಮುರ್ತೂಜ ಚಾಂದಕೋಟೆ ಹಾಗೂ ಮುಸ್ತಾಪ ಬಾವಾಸಾಬ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ.
ಮೊರಟಗಿ ರಸ್ತೆಯಲ್ಲಿರುವ ಮುರ್ತೂಜ ಭಾಗವಾನ ಎಂಬವರು ಕುಟುಂಬ ಸಮೇತ ಸೋಲಾಪೂರಕ್ಕೆ ಮದುವೆಗೆ ಹೋಗಿದ್ದಾರೆ. ಹೀಗಾಗಿ ಮನೆಯಲ್ಲಿ ಯಾರೂ ಇರ್ಲಿಲ್ಲ. ಇದರ ನಡುವೆ ನಿನ್ನೆ ರಾತ್ರಿ ಮನೆಯ ಬೀಗ ಒಡೆದು ಒಳ ಹೋದ ಖದೀಮರು, ಹೆಣ್ಮಕ್ಕಳು ಹಾಕಿಕೊಳ್ಳುವ 2 ಬಂಗಾರದ ಉಂಗುರಗಳು, 2 ಕಿವಿಯುಂಗರ, ಬಂಗಾರದ ತಾಳಿ, ಹೊಸ ವಿವೋ ಮೊಬೈಲ್ ವೊಂದು ಕಳ್ಳತನ ಮಾಡಿದ್ದಾರೆ.
ಇನ್ನು ಶಿವಶಂಕರ ಬಡಾವಣೆಯಲ್ಲಿಯ ಮುಸ್ತಾಪ ಬಾವಾಸಾಬ ಎಂಬವರ ಮನೆಯಲ್ಲಿನ 20 ಸಾವಿರ ಮೌಲ್ಯದ ಡೆಲ್ ಕಂಪನಿಯ ಲ್ಯಾಪ್ ಟಾಪ್, 18 ಸಾವಿರ ರೂಪಾಯಿಯ ಕಂಪ್ಯೂಟರ್ ಮಾನಿಟರ್ ಹಾಗೂ ಬೆಡ್ ರೂಮಿನಲ್ಲಿದ್ದ 30 ಸಾವಿರ ಮೌಲ್ಯದ ಹೆಚ್ ಪಿ ಕಂಪನಿಯ ಲ್ಯಾಪ್ ಟಾಪ್ ಸೇರಿದಂತೆ 1 ಲಕ್ಷದ 15 ಸಾವಿರ ಮೌಲ್ಯದ ಆಭರಣ, ಮೊಬೈಲ್, ಲ್ಯಾಪ್ ಟಾಪ್ ಕಳ್ಳತನ ಮಾಡಲಾಗಿದೆ. ಈ ಎರಡು ಪ್ರಕರಣ ಸಂಬಂಧ ಪ್ರಕರಣ ದಾಖಲಾಗಿದೆ.
ಹೀಗೆ ಕಳ್ಳತನ ಮಾಡಿದ ಖದೀಮರು ಪಟ್ಟಣದ ಪುರಸಭೆ ರಸ್ತೆಯಲ್ಲಿರುವ ಸಂಜೀವಿನಿ ಮೆಡಿಕಲ್ ಶಾಪ್ ಹತ್ತಿರದ ಅಂಗಡಿಯೊಂದಕ್ಕೆ ಕಲ್ಲು ಹೊಡೆಯುತ್ತಿದ್ದಾಗ ನೈಟ್ ಬೀಟ್ ನಲ್ಲಿದ್ದ ಎಎಸೈ ಹೊಸಮನಿ ಅವರು ನೋಡಿದ್ದಾರೆ. ತಕ್ಷಣ ಅವರನ್ನ ಬೆನ್ನು ಹತ್ತಿದ್ದಾರೆ. ಆಗ ಎಎಸೈ ಹೊಸಮನಿ ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದ್ರಿಂದಾಗಿ ಭುಜಕ್ಕೆ ಗಾಯವಾಗಿದೆ. ಈ ವೇಳೆ ಎಎಸೈ ಒಬ್ಬರೆ ಇದ್ದಿದ್ರಿಂದ ಕಳ್ಳರು ಎಸ್ಕೇಪ್ ಆಗಿದ್ದಾರೆ. ಎಎಸೈ ಅವರನ್ನ ನೋಡಿ ಓಡಿದ ಕಳ್ಳರಿಂದ ಕೆಲವು ಅಂಗಡಿಗಳ ಕಳ್ಳತನ ತಪ್ಪಿದೆ. ಈ ಪ್ರಕರಣ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.