ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ
ಬೆಂಗಳೂರು: ತೇನಿ ತಮಿಳು ಸಂಘ ಮತ್ತು ಸಿ.ಪಾ.ಆದಿತ್ತನಾರ್ ತಮಿಳು ಸಂಶೋಧನಾ ಸಂಸ್ಥೆಗಳ ಸಹಯೋಗದಲ್ಲಿ ಜುಲೈ 9ರಂದು ಸಂಜೆ 150 ನೇ ವೆಬಿನಾರ್ ನ ಸಮಾರೋಪ ಹಾಗೂ ಬಿರುದು ಪ್ರದಾನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ವೇಳೆ ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ಡಾ.ಮಲರ್ ವಿಳಿ.ಕೆ ಕನ್ನಡ–ತಮಿಳು ಸಾಹಿತ್ಯದ ಅನುವಾದವನ್ನು ಕುರಿತು ಪ್ರಬಂಧ ಮಂಡನೆ ಮಾಡಿದ್ದಕ್ಕೆ “ಸೊರ್ ಸುವೈ ತೇನಿ” ಎಂಬ ಬಿರುದಿಗೆ ಭಾಜನರಾಗಿದ್ದಾರೆ.
ಕಳೆದ ಮೂರು ವರ್ಷದಿಂದ ಪ್ರತಿ ಭಾನುವಾರ ಮೌಲಿಕ ವಿಷಯಗಳ ಕುರಿತು ವೆಬಿನಾರ್ ನಡೆಸುತ್ತಿದ್ದರು. ಭಾರತ ಮಾತ್ರವಲ್ಲದೆ ವಿದೇಶಗಳಿಂದಲೂ ಕವಿಗಳು, ಲೇಖಕರು, ವೈದ್ಯರು, ವಕೀಲರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಕಲಾವಿದರು, ಶಿಲ್ಪಿಗಳು, ಪ್ರಾಚ್ಯ ಸಂಶೋಧಕರು, ಅನುವಾದಕರು, ಸಾಹಿತ್ಯ ಸಂಶೋಧಕರು, ಸಂಗೀತಗಾರರು, ತಾಂತ್ರಿಕ ತಜ್ಞರು, ಮಂಗಳಮುಖಿ- ಪದ್ಮಿನಿ ಪ್ರಕಾಶ್( ವಿಶ್ವದಲ್ಲೇ ಪ್ರಥಮ ಸುದ್ದಿ ವಾಚಿಸುವವರು, ಕೊಯಮತ್ತೂರು) ಹೀಗೆ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಪಾಲ್ಗೊಂಡಿದ್ದರು.
ಅನೇಕ ವಲಯಗಳಲ್ಲಿ ಸೇವೆ ಸಲ್ಲಿಸಿ ಸಾಧಿಸಿದ ವ್ಯಕ್ತಿಗಳನ್ನು ಕುರಿತು ಸಂಶೋಧನಾತ್ಮಕ ವಿಚಾರಗಳನ್ನು ಕುರಿತು ಪ್ರಬಂಧ ಮಂಡನೆ ಮಾಡಿದ್ದರು. ಅವರುಗಳಲ್ಲಿ ಕೆಲವು ಮೌಲಿಕ ಮಾನದಂಡಗಳನ್ನಿಟ್ಟು ಆಯ್ಕೆ ಮಾಡಿಲಾಯಿತು. “ಮುತ್ತಮಿಳ್ ತೇನಿ”, “ಸೊರ್ ಸುವೈ ತೇನಿ”, “ತಮಿಳ್ ಸೇವೈ ತೇನಿ”, ʼತಮಿಳ್ ಸುವೈ ತೇನಿ” ಸುಮಾರು 29 ಪ್ರತಿಭಾನ್ವಿತರಿಗೆ ಬಿರುದುಗಳನ್ನು ನೀಡಿ ಗೌರವಿಸಲಾಯಿತು.
ತಂಜಾವೂರು ತಮಿಳು ವಿಶ್ವ ವಿದ್ಯಾಲಯದ ಉಪಕುಲಪತಿ ಡಾ.ವಿ ತಿರುವಳ್ಳುವನ್ ಅವರು ಬಿರುದು ಪ್ರದಾನ ಮಾಡಿದರು. ತೇನಿ ತಮಿಳ್ ಸಂಘದ ಅಧ್ಯಕ್ಷ ಮುತ್ತುಕಮಲಂ ಅಂತರರಾಷ್ಟ್ರೀಯ ವೆಬ್ ಪತ್ರಿಕೆಯ ಸಂಪಾದಕ ಮು.ಸುಬ್ರಮಣಿ, ಉಪಪಾಧ್ಯಕ್ಷ ಅ.ಬಾಲಕೃಷ್ಣನ್, ಕಾರ್ಯದರ್ಶಿ ಸು.ಸಿ. ಪೊನ್ ಮುಡಿ, ಉಪಕಾರ್ಯದರ್ಶಿ ಮು.ರೇಣುಕಾದೇವಿ, ಖಜಾಂಚಿ ಅ.ಮುಹಮದ್ ಪಾಶಾ, ಆರ್.ಮುರುಗೇಶನ್, ಪ್ರಾಧ್ಯಾಪಕ ಡಾ.ನೆಡುಂಚಳಿಯನ್ ಹಾಗೂ ಸಂಸ್ಥೆಯ ಸದಸ್ಯರು ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.