ಅರಿಶಿಣ ಬೆಳೆದು ಯಶಸ್ಸು ಕಂಡ ಕಲಬುರಗಿ ರೈತ

391

ಪ್ರಜಾಸ್ತ್ರ ವಿಶೇಷ

ಕಲಬುರಗಿ ತಾಲೂಕಿನ ಹಾಗರಗಾ ಗ್ರಾಮದ ರೈತ ಲಕ್ಷ್ಮಿಕಾಂತ ಹಿಬಾರೆಯವರು ಬಿರುಬಿಸಿಲ ನಾಡಲ್ಲಿಯೂ ತಮ್ಮ 3.5 ಎಕರೆ ಬರಡು ಭೂಮಿಯಲ್ಲಿ ಕೈಗೊಂಡ ಸಹಜ ಮತ್ತು ನೈಸರ್ಗಿಕ ಅರಣ್ಯ ಕೃಷಿ ಪ್ರದೇಶದಲ್ಲಿ ಪರಿಶುದ್ಧ ಔಷಧಿಯುಕ್ತ ಅರಿಶಿಣವನ್ನು ಮಿಶ್ರ ಬೆಳೆಯಾಗಿ ಬೆಳೆದು ಕೈತುಂಬ ಹಣ ಪಡೆಯುತ್ತಿದ್ದಾರೆ. ಈ ಕುರಿತು ಕಲಬುರಗಿಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ಉಪ ನಿರ್ದೇಶಕರಾದ ಜಿ.ಚಂದ್ರಕಾಂತ ಅವರ ಲೇಖನ ಇಲ್ಲಿದೆ.

ಕೃಷಿ ವಿಜ್ಞಾನ ಕೇಂದ್ರದ ತಂತ್ರಜ್ಞರ ಮಾರ್ಗದರ್ಶನದಂತೆ ಹಿಬಾರೆಯವರು ಅರಿಶಿಣ ಬೇಸಾಯಕ್ಕಾಗಿ ಸೇಲಂ ತಳಿಯ ಅರಿಶಿಣ ಬೀಜದ ಗಡ್ಡೆಗಳನ್ನು ಪ್ರತಿ ಕೆಜಿಗೆ 40ರೂಪಾಯಿಯಂತೆ 600 ಕೆಜಿ ಗಡ್ಡೆಗಳನ್ನು ಸಾರಿಗೆ ವೆಚ್ಚ ಸೇರಿ 29 ಸಾವಿರ ರೂಪಾಯಿಗೆ ಖರೀದಿಸಿದ್ದಾರೆ. ನೈಸರ್ಗಿಕ ಮತ್ತು ಜೈವಿಕ ಗೊಬ್ಬರಗಳಿಂದ ಭೂಮಿಯನ್ನು ಹದಗೊಳಿಸಿ ಮೂರು ಎಕರೆಯಲ್ಲಿ 3 ಅಡಿಯ ಏರು ಮಡಿಗಳನ್ನು ಮಾಡಿದರು. ನಂತರ ಸಾಲಿನಿಂದ ಸಾಲಿಗೆ 8 ಅಡಿ ಹಾಗೂ ಬೀಜದಿಂದ ಬೀಜಕ್ಕೆ 1.5 ಅಡಿ ಅಂತರದಲ್ಲಿ 2021ರ ಮೇ ತಿಂಗಳಲ್ಲಿ ಅರಿಶಿಣ ಬೀಜಗಳನ್ನು ನಾಟಿ ಮಾಡಿದರು. ಇದಕ್ಕಾಗಿ ಒಂದು ಲಕ್ಷ ರೂಪಾಯಿ ವೆಚ್ಚವಾಗಿದೆ.

ಹನಿ ನೀರಾವರಿಯಿಂದ ವಾರಕ್ಕೊಮ್ಮೆ  ನೀರುಣಿಸುವರಲ್ಲದೆ ಅರಶಿಣ ಬೆಳೆಗೆ ತಗಲುವ ರೋಗಗಳ ತಡೆಗಾಗಿ ಬೇವಿನೆಣ್ಣೆ, ಟ್ರೈಕೋಡರ್ಮಾ ಮುಂತಾದವನ್ನು ಬಳಸುತ್ತಿದ್ದಾರೆ. ಲಘು ಪೋಷಕಾಂಶ(ಮೈಕ್ರೋ ನ್ಯೂಟ್ರಿಯೆಂಟ್)ಗಳಿಗೆ ಪ್ರಾಶಸ್ತ್ಯ ನೀಡಿದ್ದರಿಂದ ಅರಿಶಿಣದ ಒಂದೊಂದು ಗಿಡ 6 ಅಡಿಗಿಂತ ಹೆಚ್ಚು ಎತ್ತರ ಸಮೃದ್ಧವಾಗಿ ಬೆಳೆದಿದ್ದವು. ಮೊದಲ ಬೆಳೆಯನ್ನು 10 ತಿಂಗಳಿಗೆ ಕಟಾವು ಮಾಡಲಾಗಿದೆ. ಒಂದೂವರೆ ಟನ್ ಇಳುವರಿ ಬಂದಿದೆ. ಈಗ ಒಂದು ತಿಂಗಳಲ್ಲಿ ಎರಡನೇ  ಬೆಳೆಯಿದೆ.

ಹಿಬಾರೆ ಬೆಳೆದ ಅರಿಶಿಣವನ್ನು ಭಾರತ ಸರ್ಕಾರದ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿದಾಗ ಅರಶಿಣದ ಪ್ರಮುಖ ಅಂಶವಾದ ಕರ್ಕ್ಯುಮಿನ್(curcumin) ಶೇ3.66ರಷ್ಟು ಇರುವುದು ದೃಢಪಟ್ಟಿದೆ. ಇದಕ್ಕೆ ಶ್ರೀಗಂಧದ ಆಶ್ರಯದಲ್ಲಿ ಅರಿಶಿಣ ಬೆಳೆದಿರುವುದೇ ಪ್ರಮುಖ ಕಾರಣವಾಗಿದೆ. ಇದರಿಂದ ಇದು ಕ್ಯಾನ್ಸರ್ ಮತ್ತಿತರ ರೋಗಗಳಿಗೆ ರಾಮಬಾಣವಾಗಿದೆ.

ಅರಿಶಿಣ ಪುಡಿ ತಯಾರಿಕೆಗಾಗಿ ಎಲ್ಲ ಅರಿಶಿಣ ಕೊಂಬುಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಇತ್ತೀಚಿನ ತಂತ್ರಜ್ಞಾನದಂತೆ ಕುದಿಸಿ ಒಂದು ತಿಂಗಳು ಒಣಗಿಸುವರು. ನಂತರ ಅರಿಶಿಣವನ್ನು ಪ್ರತ್ಯೇಕವಾಗಿ ವಿಂಗಡಿಸಿ ಸ್ವಚ್ಛಗೊಳಿಸಿದ ಬಳಿಕ ಅರಿಶಿಣ ಪುಡಿ ತಯಾರಿಸುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಕಲಬುರಗಿಯ  ವಿವಿಧೆಡೆಯಿರುವ ಅರಿಶಿಣ ಪುಡಿ ತಯಾರಿಕಾ ಯಂತ್ರಗಳಲ್ಲಿ ಬಾಡಿಗೆ ಆಧಾರದ ಮೇಲೆ ಪ್ರತಿ ಕೆಜಿಗೆ 30ರೂಪಾಯಿ ಪಾವತಿಸಿ “ಹಿಬಾರೆ” ಬ್ರ್ಯಾಂಡ್ ಹೆಸರಿನಲ್ಲಿ ಅರಿಶಿಣ ಪುಡಿ ತಯಾರಿಸುತ್ತಿದ್ದಾರೆ.

ರಾಜ್ಯದ ಮತ್ತು ನೆರೆಯ ಮಹಾರಾಷ್ಟçದ ಪ್ರಮುಖ ನಗರಗಳಿಗೆ ವ್ಯಾಟ್ಸ್ಅಪ್ ಮೂಲಕ ಅರಿಶಿಣ ಪುಡಿಯನ್ನು ಸಗಟು ದರದಲ್ಲಿ ಮಾರಾಟದ ವ್ಯವಸ್ಥೆ ಮಾಡಿದ್ದಾರೆ. 250ಗ್ರಾಂ,  500 ಗ್ರಾಂ ಮತ್ತು ಒಂದು ಕೆಜಿಯ ಅರಿಶಿಣ ಪುಡಿಗಳನ್ನು ತಯಾರಿಸಿ, ಕ್ರಮವಾಗಿ 100, 200 ಮತ್ತು 400ರೂಪಾಯಿ ದರ ನಿಗದಿಪಡಿಸಿದ್ದಾರೆ. ಈವರೆಗೆ 700ಕೆಜಿ ಅರಿಶಿಣ ಪುಡಿ ಮಾಡಿದ್ದು, 2 ಲಕ್ಷ ರೂಪಾಯಿ ಆದಾಯದ ನಿರೀಕ್ಷೆ ಹೊಂದಿದ್ದಾರೆ. ರಾಜ್ಯ ಸರ್ಕಾರದ ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತ ಡಾ.ಎಂ.ವಿ.ವೆಂಕಟೇಶ, ಕೃಷಿ ಅಧಿಕಾರಿಗಳು ಮತ್ತು ವಿಜ್ಞಾನಿಗಳು ಇವರು ಉತ್ಪಾದಿಸಿದ ಪರಿಶುದ್ಧ ಅರಿಶಿಣ ಪುಡಿಯನ್ನು ಖರೀದಿಸುವುದರೊಂದಿಗೆ ಇವರ ಸಾಧನೆಯ ಬಗ್ಗೆ ಪ್ರಶಂಸಿಸಿರುವುದು ವಿಶೇಷವಾಗಿದೆ.

ಲಕ್ಷ್ಮಿಕಾಂತ ಕಳೆದ 10 ವರ್ಷದಿಂದ ಅರಣ್ಯ ಕೃಷಿಯಲ್ಲಿ ತೊಡಗಿದ್ದಾರೆ. ಇವರ ಹೊಲದಲ್ಲಿ ಬೆಳೆದಿರುವ ಬಗೆಬಗೆಯ ಅರಣ್ಯ ಮತ್ತು ತೋಟಗಾರಿಕೆಯ 3875 ಗಿಡಗಳು ಈಗ ನಾಲ್ಕು ವರ್ಷದಾಗಿದ್ದು, ಅರಣ್ಯ ಪ್ರದೇಶದ ಅನುಭವ ನೀಡುತ್ತಿವೆ. ಅರಣ್ಯ ಕೃಷಿಯ ಸಾಧನೆಗಾಗಿ 2022ರ ಜನವರಿ 26ರಂದು ಕೃಷಿ ಪಂಡಿತ ಪ್ರಶಸ್ತಿಯಲ್ಲದೆ, ಬ್ಯಾಂಕ್ ಬರೋಡಾದಿಂದ ಅಕ್ಟೋಬರ್ 14ರಂದು ಶ್ರೇಷ್ಠ ಕೃಷಿಕ ಪ್ರಶಸ್ತಿ,2020ರ ಡಿಸೆಂಬರ್ 16ರಂದು ವಿಜಯ ಕರ್ನಾಟಕ ಪತ್ರಿಕೆಯ ಸೂಪರ್ ಸ್ಟಾರ್ ರೈತ ಪ್ರಶಸ್ತಿ ಮತ್ತು ರೈತ ದಿನಾಚರಣೆಯಂದು ಕರ್ನಾಟಕ ರಕ್ಷಣಾ ವೇದಿಕೆಯಿಂದ 2020ರ ಡಿಸೆಂಬರ್ 23ರಂದು ನೇಗಿಲಯೋಗಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಶ್ರೀಗಂಧದ ಮತ್ತು ರಕ್ತಚಂದನದ ಸಾಲುಗಳ ಮಧ್ಯದಲ್ಲಿ ಲಕ್ಷ್ಮಿಕಾಂತ ವಿವಿಧ ಮಿಶ್ರಬೆಳೆಗಳನ್ನೂ ಬೆಳೆಸಿ ಲಾಭ ಗಳಿಸುತ್ತಿದ್ದಾರೆ. ಪ್ರಾಚೀನ ಕಾಲದಿಂದಲೂ ಅರಿಶಿಣವನ್ನು ಸೌಂದರ್ಯವರ್ಧಕ ಮತ್ತು ಔಷಧಿ ರೂಪದಲ್ಲಿ ಮತ್ತು ಎಲ್ಲ ಧಾರ್ಮಿಕ ಕಾರ್ಯಗಳಲ್ಲಿಯೂ ಬಳಸಲಾಗುತ್ತಿದೆ. ಇದು ಕೆಲವು ರೋಗಗಳು ಬಾರದಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು. ಇದರ ಬೇಸಾಯ ಮತ್ತು ಜನಜಾಗೃತಿ ಮೂಡಿಸಬೇಕಾಗಿದೆ ಎನ್ನುತ್ತಾರೆ ಲಕ್ಷ್ಮಿಕಾಂತ ಹಿಬಾರೆ. ಇವರ ಸಂಪರ್ಕ ಸಂಖ್ಯೆ 9886108951 ಆಗಿದೆ.




Leave a Reply

Your email address will not be published. Required fields are marked *

error: Content is protected !!