ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಬೆಂಗಳೂರಿನಲ್ಲೊಂದು ಪುಟ್ಟ ಕುಂದಾಪುರ ನಿರ್ಮಾಣವಾಗಿತ್ತು' ಎಂದರೆ ಖಂಡಿತ ತಪ್ಪಾಗಲಾರದು! ನಿನ್ನೆ, ಅಂದರೆ ಆಗಸ್ಟ್ 30 ರಂದು ಬೆಂಗಳೂರಿನ ವಿಜಯನಗರದ ಬಿಜಿಎಸ್ ಮೈದಾನದಲ್ಲಿ 'ಟೀಮ್ ಕುಂದಾಪುರಿಯನ್ಸ್' ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕುಂದಾಪ್ರ ಕನ್ನಡ ಉತ್ಸವ 2026 ಅತ್ಯಂತ ವಿಜೃಂಭಣೆ ಮತ್ತು ಸಂಭ್ರಮದಿಂದ ನೆರವೇರಿತು. ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮೈದಾನದಾದ್ಯಂತ ಕೇವಲ ಕುಂದಾಪ್ರ ಕನ್ನಡದ ಸೊಗಡು, ಕರಾವಳಿಯ ಆಚಾರ-ವಿಚಾರ ಮತ್ತು ಸಂಸ್ಕೃತಿಯ ಹಬ್ಬವೇ ಮನೆಮಾಡಿತ್ತು."
ಕಾರ್ಯಕ್ರಮದ ಆರಂಭದಲ್ಲಿ ಜಾನಪದ ಕಲಾತಂಡಗಳ ವೈಭವದ ಮೆರವಣಿಗೆ ಎಲ್ಲರ ಗಮನ ಸೆಳೆಯಿತು. ಭಾಷೆಯ ಮೇಲಿನ ಪ್ರೀತಿಯಿಂದ ಸಾವಿರಾರು ಜನರು ಈ ಉತ್ಸವದಲ್ಲಿ ಭಾಗಿಯಾಗಿದ್ದರು. ರಂಗೇರಿದ ನೃತ್ಯ ವೈಭವ, ಯುವ ಸಂಗಮ, ಡಿಜೆ ಕುಂದಾಪುರ ಮತ್ತು ಕರಾವಳಿಯ ಗಂಡುಕಲೆ ಯಕ್ಷಗಾನ ಪ್ರದರ್ಶನ ನೋಡುಗರನ್ನು ಮಂತ್ರಮುಗ್ಧಗೊಳಿಸಿತು. ಇನ್ನು ಹಳೆಯ ಕಾಲದಲ್ಲಿ ಬಳಸ್ತಾ ಇದ್ದ ಹಲವು ವಸ್ತುಗಳು ಇಂದು ಮೂಲೆ ಸೇರಿವೆ ಇವುಗಳ ಪರಿಚಯವೇ ಎಷ್ಟೋ ಜನರಿಗೆ ಇರದ ಈ ಕಾಲದಲ್ಲಿ ವಸ್ತು ಪ್ರದರ್ಶನದ ಮೂಲಕ ಇವುಗಳನ್ನು ಪರಿಚಯಿಸಲಾಯಿತು. ಮತ್ತು ಕರಾವಳಿಯ ವಿವಿಧ ಬಗೆಯ ಮೀನುಗಳ ಪ್ರದರ್ಶನ ನೋಡಲು ಜನಸಾಗರವೇ ಹರಿದುಬಂದಿತ್ತು.

ಹಳ್ಳಿಯ ಆಟೋಟ ಸ್ಪರ್ಧೆಗಳು ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿದರೆ, 'ಕುಂದಾಪುರ ಸಂವಾದ' ಕಾರ್ಯಕ್ರಮದಲ್ಲಿ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಯ ಕುರಿತು ಅರ್ಥಪೂರ್ಣ ಚರ್ಚೆಗಳು ನಡೆದವು. ಕುಂದಾಪುರ ಭಾಗದ ವಿವಿಧ ಸಂಸ್ಕೃತಿಗಳನ್ನು ಬಿಂಬಿಸುವಂತಹ ವಿವಿಧ ಕ್ರಿಯೇಟರ್ಸ್ ಗಳನ್ನ ಕರೆಸಿ, ಅವರ ಮೂಲಕ ಯುವಸಂಗಮ ಎಂಬ ಕಾರ್ಯಕ್ರಮವನ್ನು ನಡೆಸಲಾಯಿತು.
ಇದರ ಜೊತೆಗೆ ಕಾರ್ಯಕ್ರಮದಲ್ಲಿ 10 ಹಲವು ಗಣ್ಯರು ಮತ್ತು ಸಿನಿಮಾ ತಾರೆಯರು ಕುಂದಾಪುರದ ವಿಶಿಷ್ಟ ಸಂಸ್ಕೃತಿಯ ಬಗ್ಗೆ ಅದ್ಭುತವಾಗಿ ಮಾತನಾಡಿದರು. ಕುಂದಾಪುರ ಕನ್ನಡ ಭಾಷೆಯ ಉಳಿವಿಗಾಗಿ ಹೇಗೆಲ್ಲ ಶ್ರಮಿಸಬೇಕು ಎಂಬುದನ್ನ ಅದ್ಭುತವಾಗಿ ತಿಳಿಸಿಕೊಟ್ಟರು.
ಈ ಉತ್ಸವದ ಮುಖ್ಯ ವಿಶೇಷತೆ ಎಂದರೆ, ಇದು ಕೇವಲ ಕುಂದಾಪುರದ ಜನರಿಗೆ ಮಾತ್ರ ಸೀಮಿತವಾಗಿರಲಿಲ್ಲ. ಬೆಂಗಳೂರಿನ ಮೂಲೆ ಮೂಲೆಯಿಂದ ಬಂದ ಕನ್ನಡ ಪ್ರೇಮಿಗಳು, ಕರಾವಳಿಯ ಸಂಸ್ಕೃತಿಯ ಸವಿಯನ್ನು ಸವಿದರು. ಕುಂದಾಪ್ರ ಕನ್ನಡದ ವಿಶಿಷ್ಟ ಶೈಲಿಯ ಸಂಭಾಷಣೆ, ನಗು, ಹರಟೆ ಮತ್ತು ಪ್ರೀತಿಯ ಸಮ್ಮಿಲನಕ್ಕೆ BGS ಮೈದಾನ ಸಾಕ್ಷಿಯಾಯಿತು. ಸಂಘಟಕರಾದ 'ಟೀಮ್ ಕುಂದಾಪುರಿಯನ್ಸ್' ತಂಡದ ನೇತೃತ್ವದಲ್ಲಿ ಮೂಡಿಬಂದ ಈ ಕಾರ್ಯಕ್ರಮ, ರಾಜಧಾನಿಯಲ್ಲಿ ಕರಾವಳಿ ಸಂಸ್ಕೃತಿಯ ಜ್ಯೋತಿಯನ್ನು ಮತ್ತಷ್ಟು ಉಜ್ವಲಗೊಳಿಸಿತು."

ತಾಯ್ನೆಲದಿಂದ ದೂರವಿದ್ದರೂ ತಮ್ಮ ಹುಟ್ಟೂರಿನ ಭಾಷೆ, ಕಲೆ, ಸೇವೆ ಮತ್ತು ಸಂಪ್ರದಾಯವನ್ನು ಉಳಿಸಿ ಬೆಳೆಸುವ ಟೀಮ್ ಕುಂದಾಪುರಿಯನ್ಸ್ ಸಂಸ್ಥೆಯ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಒಟ್ಟಿನಲ್ಲಿ, ನಿನ್ನೆ ನಡೆದ 'ಕುಂದಾಪ್ರ ಕನ್ನಡ ಉತ್ಸವ 2026' ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಅಳಿಸಲಾಗದ ಸುಂದರ ನೆನಪುಗಳನ್ನು ಬಾಚಿ ತಂದಿದೆ. ಒಟ್ಟಾರೆ ಟೀಮ್ ಕುಂದಾಪುರ ವತಿಯಿಂದ ನಡೆದ ಎಂಟನೇ ವರ್ಷದ ಈ ಕಾರ್ಯಕ್ರಮ ಅದ್ಭುತವಾದ ಯಶಸ್ಸನ್ನ ಪಡೆದಿದೆ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದ ಕಾರ್ಯಕ್ರಮ ನಡೆಸುವ ಯೋಜನೆಗಳಿಗೆ ಮತ್ತಷ್ಟು ಸ್ಪೂರ್ತಿ ಸಿಕ್ಕಿದೆ.



