ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಹಲಸಂಗಿ ಗೆಳೆಯರ ಪ್ರತಿಷ್ಠಾನದ ವಾರ್ಷಿಕ ಗೌರವ ಹಾಗೂ ಯುವ ಪ್ರಶಸ್ತಿಗಳನ್ನು ಪ್ರತಿಷ್ಠಾನದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳಾದ ಡಾ.ಆನಂದ ಕೆ. ಅವರು ಪ್ರಕಟಿಸಿದ್ದಾರೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಷ್ಠಾನದ ಸಭೆಯಲ್ಲಿ ಅರ್ಹರಿಗೆ ಪ್ರಶಸ್ತಿಗಳನ್ನು ಅಂತಿಮಗೊಳಿಸಲಾಗಿದೆ. ಪ್ರತಿಷ್ಠಾನದ ಗೌರವ ವಾರ್ಷಿಕ ಪ್ರಶಸ್ತಿಯನ್ನು ಜಾನಪದ ಸಾಹಿತ್ಯ ಸಮಗ್ರ ಸಾಹಿತ್ಯ ಹಾಗೂ ವಿಮರ್ಶೆ, ಸೃಜನಶೀಲ ಸಾಹಿತ್ಯ ಕ್ಷೇತ್ರದಲ್ಲಿ ಕೃತಿಗಳನ್ನು ಗಣನೀಯ ಸೇವೆ ಸಲ್ಲಿಸಿರುವ ಸಾಹಿತಿಗಳನ್ನು ಹಾಗೂ ಯುವ ಪ್ರಶಸ್ತಿಗೆ ಅತ್ಯುತ್ತಮ ಕೃತಿಗಳನ್ನು ರಚಿಸಿದ ಯುವ ಬರಹಗಾರರನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿದೆ.
ವಾರ್ಷಿಕ ಗೌರವ ಪ್ರಶಸ್ತಿ 50 ಸಾವಿರ ರೂ. ಗಳು ಹಾಗೂ ಯುವ ಪ್ರಶಸ್ತಿಗೆ 10 ಸಾವಿರ ರೂ. ಗಳ ನಗದಿನೊಂದಿಗೆ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ವಾರ್ಷಿಕ ಪ್ರಶಸ್ತಿ ಪುರಸ್ಕೃತರು: ಜನಪದ ಕ್ಷೇತ್ರದಲ್ಲಿ 2022ನೇ ವಾರ್ಷಿಕ ಗೌರವ ಪ್ರಶಸ್ತಿಗೆ ದಕ್ಷಿಣಕನ್ನಡ ಜಿಲ್ಲೆಯ ಡಾ. ಬಿ.ಎ. ವಿವೇಕ ರೈ ಪುರಸ್ಕೃತರಾಗಿದ್ದಾರೆ. ಸಮಗ್ರ ಸಾಹಿತ್ಯ ಕ್ಷೇತ್ರದಲ್ಲಿ 2023ನೇ ವಾರ್ಷಿಕ ಗೌರವ ಪ್ರಶಸ್ತಿಗೆ ಕಲಬುರಗಿ ಜಿಲ್ಲೆಯ ಪ್ರೊ. ಎಚ್.ಟಿ. ಪೋತೆ ಹಾಗೂ ಸಂಶೋಧನೆ ಮತ್ತು ವಿಮರ್ಶಾ ಕ್ಷೇತ್ರದಲ್ಲಿ 2024ರ ವಾರ್ಷಿಕ ಗೌರವ ಪ್ರಶಸ್ತಿಗೆ ಬೆಂಗಳೂರು ಜಿಲ್ಲೆಯ ಶ್ರೀಮತಿ ನೇಮಿಚಂದ್ರ ಅವರು ಪುರಸ್ಕೃತರಾಗಿದ್ದಾರೆ. ಎಂದು ತಿಳಿಸಿದ್ದಾರೆ.

ಯುವ ಪ್ರಶಸ್ತಿ ಪುರಸ್ಕೃತರು: ಪ್ರತಿಷ್ಠಾನದ ಯುವ ಪ್ರಶಸ್ತಿಗೆ ಮೂವರು ಆಯ್ಕೆಯಾಗಿದ್ದಾರೆ. 2022ನೇ ಸಾಲಿನ ಯುವ ಪ್ರಶಸ್ತಿಗೆ ವಿಜಯಪುರ ಜಿಲ್ಲೆಯ ಡಾ.ವಿನಯ ನಂದಿಹಾಳ, 2023ನೇ ಸಾಲಿನ ಪ್ರಶಸ್ತಿಗೆ ತುಮಕೂರು ಜಿಲ್ಲೆಯ ಡಾ. ಗೋವಿಂದರಾಜು ಕೆ.ಎಂ. ಹಾಗೂ 2024ನೇ ಸಾಲಿನ ಬೆಂಗಳೂರಿನ ವಿಜಯನಗರ ನಿವಾಸಿ ಶಶಿ ತರೀಕೆರೆ ಅವರು ಪುರಸ್ಕೃತರಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



