ಪ್ರಜಾಸ್ತ್ರ ಸುದ್ದಿ
ಅಯೋಧ್ಯೆ(Ayodhya): ಇಲ್ಲಿನ ರಾಮಮಂದಿರಕ್ಕೆ ಭಕ್ತರು ಅರ್ಪಿಸಿದ ಕೋಟ್ಯಾಂತರ ರೂಪಾಯಿ ದೇಣಿಗೆ ದುರುಪಯೋಗ ಮಾಡಿಕೊಂಡಿರುವ ಗಂಭೀರ ಆರೋಪ ಕೇಳಿ ಬಂದಿದೆ. ಹೀಗಾಗಿ ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿದ್ದು, ಒಂದು ವಾರದೊಳಗೆ ಮಧ್ಯಂತರ ವರದಿ, 15 ದಿನದೊಳಗೆ ಅಂತಿಮ ವರದಿ ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಹೇಳಲಾಗುತ್ತಿದೆ.
ಲಖನೌ ಕಮಿಷನರ್ ವಿಜಯ್ ವಿಶ್ವಾಸ್ ಪಂತ್, ಹಣಕಾಸು ಇಲಾಖೆಯ ವಿಶೇಷ ಕಾರ್ಯದರ್ಶಿ ನೀಲ್ ರತನ್, ಲಖನೌ ವಲಯದ ಐಜಿ ಕಿರಣ್.ಎಸ್ ಅವರನ್ನೊಳಗೊಂಡ ಎಸ್ಐಟಿ ತಂಡ ರಚನೆ ಮಾಡಲಾಗಿದೆ. ಇಂದು(ಭಾನುವಾರ) ಅಯೋಧ್ಯೆಗೆ ತಂಡ ಭೇಟಿ ನೀಡಿ ಸಿಬ್ಬಂದಿಯ ವಿಚಾರಣೆ ನಡೆಸಲಿದೆ ಎಂದು ಹೇಳಲಾಗಿದೆ. ಇಲ್ಲಿಯವರೆಗೆ ಪೊಲೀಸರು ಸಂಗ್ರಹಿಸಿರುವ ದಾಖಲೆಗಳು, ಸಾಕ್ಷಿಗಳನ್ನು ವಶಕ್ಕೆ ಪಡೆಯಲಿದೆ.
ಕಾಣಿಕೆ ದುರಪಯೋಗದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ನಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಅಲ್ಲದೆ ಬಿಜೆಪಿ ಮಾಜಿ ಸಂಸದ, ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಹ ದೇಣಿಗೆ ದುರಪಯೋಗದ ಬಗ್ಗೆ ಮಾತನಾಡಿದ್ದರು. ಈ ಬಗ್ಗೆ ಸತ್ಯೆ ಹೇಳಿದರೆ ತಮಗೆ ಅಪಾಯವಿದೆ ಅಂತಾನೂ ಹೇಳಿದ್ದರು.



