ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಮನೆಯ ಚಾವಣಿ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಗುಮ್ಮಟನಗರಿಯಲ್ಲಿ ನಡೆದಿದೆ. ಜಿಲ್ಲೆಯ ನಿಡಗುಂದಿ ಪಟ್ಟಣದ ಗೌರೀಶ್ವರ ದೇವಸ್ಥಾನದ ಹತ್ತಿರವಿದ್ದ ಮನೆಯೊಂದರ ಮೇಲ್ಛಾವಣಿ ಗುರುವಾರ ನಸುಕಿನಜಾವ ಕುಸಿದಿದೆ. 55 ವರ್ಷದ ಮಹಾದೇವಿ ವಾರದ ಅನ್ನೋ ಮಹಿಳೆ ಮೃತಪಟ್ಟಿದ್ದಾರೆ.
ಮನೆಯ ಹೊರಗೆ ಮಲಗಿದ್ದ ಪತಿ ಶಿವಾನಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿದ್ದಾರೆ. ಮೊನ್ನೆ ಸುರಿದಿದ್ದ ಮಳೆಗೆ ಹಳೆಯ ಮನೆಯ ಚಾವಣಿ ನೆನೆದಿತ್ತು. ಮನೆಯೊಳಗೆ ಮಲಗಿದ್ದ ಮಹಾದೇವಿ ಮೃತಪಟ್ಟಿದ್ದಾರೆ. ಕಳೆದ ಗುರುವಾರವಷ್ಟೇ ಜಿಲ್ಲೆಯ ಆಲಮೇಲ ತಾಲೂಕಿನ ಮೊರಟಗಿ ಗ್ರಾಮದಲ್ಲಿ ಇದೆ ರೀತಿ ಮನೆ ಚಾವಣಿ ಕುಸಿದು ಗಂಡ, ಹೆಂಡತಿ, ಇಬ್ಬರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಈಗ ಮತ್ತೊಂದು ಇಂತಹ ದುರಂತ ನಡೆದಿದೆ.



