ಪ್ರಜಾಸ್ತ್ರ ಸುದ್ದಿ, ಮಹೇಶ ಶರ್ಮಾ
ಮಂಗಸೂಳಿ/ಕಾಗವಾಡ(Kagawad): ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಾರ್ಡ್ ನಂಬರ್ 6ರ ಎಸ್ಸಿ ಕಾಲೋನಿಯಲ್ಲಿ ಚರಂಡಿ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಇಲ್ಲಿನ ನಿವಾಸಿ ರೋಹಿಣಿ ರೋಹಿದಾಸ ಭಂಡಾರೆ ಎಂಬುವವರ ಮನೆಯ ಗೋಡೆಗೆ ಅಂಟಿಕೊಂಡೇ ಚರಂಡಿ ನಿರ್ಮಾಣವಾಗಿರುವುದರಿಂದ, ನೀರು ಸೋರಿಕೆಯಾಗಿ ಮನೆ ಗೋಡೆಗಳು ಹಸಿಯಾಗಿ ಶೀಥಲಗೊಳ್ಳುತ್ತಿವೆ.
ಹಲವು ಕಡೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ: ಈ ಕುರಿತು ಸಂತ್ರಸ್ತರು ಮಂಗಸೂಳಿ ಗ್ರಾಮ ಪಂಚಾಯತ್, ಕಾಗವಾಡ ತಾಲೂಕು ಪಂಚಾಯತ್ ಹಾಗೂ ತಹಶೀಲ್ದಾರರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ, ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿ ಚೌಧರಿ ಅವರು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಕರೆ ಮಾಡಿ ಸೂಚನೆ ನೀಡಿದ್ದರೂ ಸಹ, ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ಆಡಳಿತ ವ್ಯವಸ್ಥೆಯ ಮೌನಕ್ಕೆ ಸಾಕ್ಷಿಯಾಗಿದೆ.
ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯಿಂದ ಸ್ಥಳ ಪರಿಶೀಲನೆ: ಸಂತ್ರಸ್ತರ ಅಳಲನ್ನು ಆಲಿಸಿದ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಬಿ.ಎಚ್.ಜಮಾದಾರ ಅವರ ಆದೇಶದ ಮೇರೆಗೆ, ಅಥಣಿ ಘಟಕದ ಮುಖ್ಯಸ್ಥರಾದ ಪ್ರವೀಣ ನಾಯಿಕ, ಅನೀಲ ಭಾಮನೆ, ಶರಣಪ್ಪ ಶಿಂದೆ ಹಾಗೂ ಎಂ.ಎಂ.ಶರ್ಮಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಸಂಘಟನೆಯ ಮುಖ್ಯಸ್ಥ ಪ್ರವೀಣ ನಾಯಿಕ ಅವರು, ಸಾರ್ವಜನಿಕ ಚರಂಡಿಗೆ ಪೈಪ್ಲೈನ್ ಮೂಲಕ ನೀರು ಬಿಡಲು ಅವಕಾಶ ನೀಡದಿರುವುದು ಸರಿಯಲ್ಲ. ಚರಂಡಿ ಎಂಬುದು ಸಾರ್ವಜನಿಕ ಸ್ವತ್ತು. ಇಲ್ಲಿ ಎಲ್ಲರಿಗೂ ಸಮಾನ ಅವಕಾಶವಿರಬೇಕು. ಈ ಕುರಿತು ಪಿಡಿಒ ಸಂಜಯ ಸೂರ್ಯವಂಶಿ ಅವರೊಂದಿಗೆ ಚರ್ಚಿಸಲಾಗಿದ್ದು, ಕೂಡಲೇ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ಸಂತ್ರಸ್ತರ ಆಗ್ರಹ: ನಮ್ಮ ಮನೆಯ ಶೌಚಾಲಯ ಮತ್ತು ದಿನಬಳಕೆಯ ನೀರನ್ನು ಚರಂಡಿಗೆ ಬಿಡಲು ಬಿಡುತ್ತಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೇವಲ ಭರವಸೆ ನೀಡುತ್ತಿದ್ದಾರೆಯೇ ಹೊರತು ನ್ಯಾಯ ಒದಗಿಸುತ್ತಿಲ್ಲ. ಗೋಡೆ ಕುಸಿದು ಅನಾಹುತವಾದರೆ ಯಾರು ಹೊಣೆ ಎಂದು ರೋಹಿಣಿ ಭಂಡಾರೆ ಪ್ರಶ್ನಿಸಿದ್ದಾರೆ. ಈ ಕೂಡಲೇ ಜಿಲ್ಲಾಡಳಿತ, ಜಿಲ್ಲಾ ಉಸ್ತವಾರಿ ಸಚಿವರು ಹಾಗೂ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ, ಬಡ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಗ್ರಾಮಸ್ಥರು ಮತ್ತು ಸಾಮಾಜಿಕ ಹೋರಾಟಗಾರರು ಆಗ್ರಹಿಸಿದ್ದಾರೆ.



