ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಅಂಗವಿಕಲತೆಯನ್ನು ಮೆಟ್ಟಿ ನಿಂತು ಭಾರತೀಯ ದೈಹಿಕ ಅಂಗವಿಕಲರ (ಪಿಡಿ) ಕ್ರಿಕೆಟ್ ತಂಡದಲ್ಲಿ ಆರಂಭಿಕ ಬ್ಯಾಟ್ಸ್ಮನ್ ಆಗಿ ದೇಶಕ್ಕೆ ಕೀರ್ತಿ ತಂದಿರುವ ವಿಜಯಪುರದ ರಾಜೇಶ್ ಕನ್ನೂರು ಅವರಿಗೆ ಜಿಲ್ಲಾ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ವತಿಯಿಂದ ಇತ್ತೀಚೆಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ದಲಿತ ಸ್ವರಾಜ್ಯ ಸೇನೆ-ಕರ್ನಾಟಕ ಸಂಘಟನೆ ಅಧ್ಯಕ್ಷ ಗೌಡಪ್ಪ ಬಡಿಗೇರ ಮಾತನಾಡಿ, ಆಲಕುಂಟೆಯ ಕೊಳೆಗೇರಿ ಗುಡಿಸಲಿನಲ್ಲಿರುವ ರಾಜೇಶ್ ಕನ್ನೂರು ಅವರ ಪೋಷಕರು ಚಿಂದಿ ಆಯುವ ಮೂಲಕ ಕುಟುಂಬ ನಿರ್ವಹಿಸುತ್ತಿದ್ದು, ರಾಜೇಶ್ ಅವರು ಕೂಡ ಕಠಿಣ ಸವಾಲುಗಳ ನಡುವೆಯೂ ಕ್ರೀಡಾ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಕೇವಲ 65 ಎಸೆತಗಳಲ್ಲಿ 119 ರನ್ ಬಾರಿಸುವ ಮೂಲಕ ಅಂತರರಾಷ್ಟ್ರೀಯ ಪಂದ್ಯಾವಳಿಯಲ್ಲಿ ಶತಕ ಬಾರಿಸಿದ ಭಾರತದ ಮೊಟ್ಟಮೊದಲ ಪಿಡಿ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ, ಡಿಸಿಸಿಐ ನೀಡುವ ‘ವರ್ಷದ ಆಟಗಾರ’ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ಅವರ ಕಠಿಣ ಪರಿಶ್ರಮ ಎಲ್ಲರಿಗೂ ಪ್ರೇರಣೆಯಾಗಿದೆ ಎಂದರು.
ಟಿ-20 ಕ್ರಿಕೆಟ್ ಟೂರ್ನಿಗಳಲ್ಲಿ ಭಾರತವನ್ನು ಪ್ರತಿನಿಧಿಸುವ 17 ಆಟಗಾರರ ತಂಡದಲ್ಲಿ ರಾಜೇಶ್ ಸ್ಥಾನ ಪಡೆದಿರುವುದು ನಗರಕ್ಕೆ ಹಾಗೂ ಇಡೀ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ. ಇಂತಹ ಅಪರೂಪದ ಪ್ರತಿಭೆಗೆ ಸೂಕ್ತ ವಸತಿ ಹಾಗೂ ಆರ್ಥಿಕ ನೆರವಿನ ಅಗತ್ಯವಿದ್ದು, ಸರ್ಕಾರ ಮತ್ತು ಕ್ರೀಡಾಭಿಮಾನಿಗಳು ಪ್ರೋತ್ಸಾಹ ನೀಡಬೇಕಾಗಿದೆ ಅಂತಾ ಹೇಳಿದರು. ಈ ವೇಳೆ ಕೊಳಗೇರಿ ಅಭಿವೃದ್ಧಿ ಮಂಡಳಿ ಸಿಬ್ಬಂದಿ ಗುರುನಾಥ ಬೆಂಕಿ, ಸಂಘಟನೆಯ ಸಂಚಾಲಕರಾದ ಅಮೃತ ಮಾವಿನಹಳ್ಳಿ, ಸುನಿಲ ಕುಮಾರ ಕಳಸರೆಡ್ಡಿ, ಪರಶುರಾಮ ಕರವಿನಾಳ, ಅಕ್ಷಯ ಕುಮಾರ ಅಜಮನಿ, ಎಂ.ಆರ್.ದೊಡಮನಿ, ಆರೂಢಸ್ವಾಮಿ ಕಬಾಡೆ, ಹುಲಗೇಪ್ಪ ಹಂದ್ರಾಳ, ಗುರುಪಾದ ಬಿರಾದಾರ ಸೇರಿ ಇತರರಿದ್ದರು.



