ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮ ಖಂಡಿಸಿ 22 ದಿನಗಳ ಕಾಲ ಉಪವಾಸ ಕುಳಿತಿದ್ದ ಪರಿಸರ ಕಾರ್ಯಕರ್ತ ಸೊನಮ್ ವಾಂಗ್ಚೂಕ್ ಅವರನ್ನು ಜುಲೈ 18ರಂದು ಪೊಲೀಸರು ಬಲವಂತದಿಂದ ಆಸ್ಪತ್ರೆಗೆ ಎತ್ತಿಕೊಂಡು ಹೋದರು. ಈ ಬಗ್ಗೆ ಮಾತನಾಡಿರುವ ವಾಂಗ್ಚೂಕ್, ಅದು ಆಸ್ಪತ್ರೆಯಾಗಿರಲಿಲ್ಲ. ಜೈಲಾಗಿತ್ತು. ನನ್ನನ್ನು ಕೈದಿಯಂತೆ ಇಡಲಾಗಿತ್ತು ಎಂದಿದ್ದಾರೆ.
ಆಸ್ಪತ್ರೆಯಲ್ಲಿ ಫೋನ್, ಲ್ಯಾಪ್ ಟಾಪ್ ಇಟ್ಟುಕೊಳ್ಳಲು ಬಿಟ್ಟಿಲ್ಲ. ಪ್ರತಿ ವಿಷಯಕ್ಕೂ ನಿರ್ಬಂಧ ಹೇರಲಾಗಿತ್ತು. ರೂಮಿನಿಂದ ಹೊರಗೆ ಬರಲು ಬಿಟ್ಟಿಲ್ಲ. ಯಾರಿಗೂ ಭೇಟಿಯಾಗಲು ಅನುಮತಿ ನೀಡಿಲ್ಲ. ಕೇವಲ ಮೂವರು ಸಂಬಂಧಿಕರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಒಂದು ರೀತಿಯಲ್ಲಿ ಉತ್ತರ ಕೋರಿಯಾದಲ್ಲಿ ಇದ್ದಂತೆ ಭಾಸವಾಗಿದೆ ಎಂದು ಹೇಳಿದ್ದಾರೆ. ಇಡೀ ಆಸ್ಪತ್ರೆಯನ್ನು ಮಿಲಿಟರಿ ಶಿಬಿರದಂತೆ ಮಾಡಲಾಗಿತ್ತು. ನನ್ನ ರೂಮಿನ ಹೊರಗೆ 5 ರಿಂದ 10 ಪೊಲೀಸ್ ಸಿಬ್ಬಂದಿಯನ್ನು ಇದ್ದರು. ಕೆಳಮಹಡಿಯಲ್ಲಿ ಇನ್ನೊರಿಂದ ಮುನ್ನೂರು ಪೊಲೀಸರು ಇದ್ದರು ಎಂದು ಹೇಳಿದ್ದಾರೆ.



