ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳು ಹೊಸದಾಗಿ ಅರ್ಜಿ ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ವಿಧಾನಸೌಧದ ಸಮ್ಮೇಳನದ ಸಭಾಂಗಣದಲ್ಲಿ ನಡೆದ ಜಿಲ್ಲಾಡಳಿತ ಮುಖ್ಯಸ್ಥರೊಂದಿಗಿನ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಹೊಸದಾಗಿ ಅರ್ಜಿ ಸ್ವೀಕರಿಸಲು ಸರ್ಕಾರ ಮುಂದಾಗಿದೆ.
ಎಲ್ಲ ಇಲಾಖೆಗಳ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಸಚಿವರೊಂದಗಿನ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳನ್ನು ಪರಿಷ್ಕರಿಸಬೇಕಿದೆ. ನಿಧನರಾದವರ ಹೆಸರಿನಲ್ಲಿ ಬೇರೆಯವರು, ಕೆಲವರು ಮೂರ್ನಾಲ್ಕು ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆಗುತ್ತಿದೆ. ಹೀಗಾಗಿ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಲಿ ಅನ್ನೋ ಕಾರಣಕ್ಕೆ ಈ ತೀರ್ಮಾನಕ್ಕೆ ಬರಲಾಗಿದೆ ಎಂದಿದ್ದಾರೆ.
ಇನ್ನು ಗೃಹಜ್ಯೋತಿ ಯೋಜನೆಗೂ ಸಂಬಂಧಿಸಿದಂತೆಯೂ ಹೊಸ ಅರ್ಜಿ ಪಡೆಯಲು ಸಿದ್ಧತೆ ನಡೆದಿದೆ. ಒಬ್ಬರ ಹೆಸರಲ್ಲಿ ಐದಾರು ಮೀಟರ್ ಗಳಿರುವುದು ಪತ್ತೆಯಾಗಿದೆ. ಇದರ ಲಾಭ ಪಡೆಯುತ್ತಿರುವ ಫಲಾನುಭವಿಗಳು ವಾಸವಾಗಿದ್ದರೋ ಇಲ್ಲವೋ, ನಮ್ಮ ರಾಜ್ಯದವರು ಹೊರತುಪಡಿಸಿ ಬೇರೆಯವರು ಇದರ ಲಾಭ ಪಡೆಯುತ್ತಿದ್ದಾರೆಯೇ ಎಂದು ಪರಿಶೀಲಸಬೇಕಿದೆ. ಹೀಗಾಗಿ ಹೊಸ ಅರ್ಜಿ ಹಾಕಬೇಕು ಎಂದು ಸಿಎಂ ತಿಳಿಸಿದ್ದಾರೆ.



