ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ತಾಲೂಕಿನಾದ್ಯಂತ ಬೆಳೆ ಸಮೀಕ್ಷೆ ನಡೆಸಲಾಗುತ್ತಿದೆ. ರೈತರು ಇದರಲ್ಲಿ ಭಾಗವಹಿಸಿ ಬೆಳೆ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕು. ಜಮೀನಿನ ವಿಸ್ತೀರ್ಣ ಹಾಗೂ ಬೆಳೆದ ಬೆಳೆಯ ಕುರಿತು ಸಂಪೂರ್ಣ ಮಾಹಿತಿ ನೀಡುವ ಮೂಲಕ ಸರ್ಕಾರದ ಪ್ರಯೋಜನವನ್ನು ಪಡೆಯಬಹುದು ಎಂದು ತಹಶೀಲ್ದಾರ್ ಕರೆಪ್ಪ ಬೆಳ್ಳಿ ತಿಳಿಸಿದರು. ಶನಿವಾರ ತಾಲೂಕು ಆಡಳಿತ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು.
ತಾಲೂಕಿನಲ್ಲಿ 17,552 ರೈತರು ಬೆಳೆ ವಿಮೆಯನ್ನು ಕಟ್ಟಿದ್ದಾರೆ. ಇದು ಕ್ಲೇಮ್ ಆಗಬೇಕು ಎಂದರೆ ಸಮೀಕ್ಷೆಯಲ್ಲಿ ಭಾಗವಹಿಸಬೇಕು. ಬೆಳೆ ಸಮೀಕ್ಷೆಗಾಗಿ ಸಿಬ್ಬಂದಿ ನೇಮಕ ಮಾಡಲಾಗಿದೆ. ಅವರು ಬಂದ ಸಂದರ್ಭದಲ್ಲಿ ರೈತರು ತಮ್ಮ ಹೊಲದ ವಿಸ್ತೀರ್ಣ, ಬೆಳೆಯ ಬಗ್ಗೆ ಮಾಹಿತಿ ನೀಡಬೇಕು. ಯಾವ ಯಾವ ಹಿಸ್ಸಾದಲ್ಲಿ ಯಾವ ಯಾವ ಬೆಳೆಯನ್ನು ಬೆಳೆಯಲಾಗಿದೆ ಅನ್ನೋದರ ಕುರಿತು ಸಹ ಮಾಹಿತಿ ನೀಡಬೇಕು. ಇಲ್ಲದೆ ಹೋದರೆ ನೀವು ಹೇಳುವ ಒಂದು ಬೆಳೆಗೆ ಮಾತ್ರ ವಿಮೆ ಸಿಗುತ್ತೆ. ತಪ್ಪು ಮಾಹಿತಿ ನೀಡಿದರೆ ಹೊಂದಾಣಿಕೆ ಆಗುವುದಿಲ್ಲ. ಸಮೀಕ್ಷೆಯಲ್ಲಿ ನೇಮಕವಾಗಿರುವ ಸಿಬ್ಬಂದಿ ಅಕ್ರಮವೆಸಗಿದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ ಸಾಣೆ ಮಾತನಾಡಿ, ಬೆಳೆ ಸಮೀಕ್ಷೆಯಲ್ಲಿ ತಾಲೂಕಿನ ರೈತರು ಭಾಗವಹಿಸುವ ಮೂಲಕ ಇದನ್ನು ಯಶಸ್ವಿಗೊಳಿಸಬೇಕು. ವಿಮಾ ಕಂಪನಿಯ ಹೆಸರಿನಲ್ಲಿ ಯಾರಾದರೂ ದಲ್ಲಾಳಿಗಳು ಆಮಿಷ ತೋರಿಸಿ ವಂಚನೆ ಮಾಡುವುದು ಕಂಡು ಬಂದರೆ ನಮಗೆ ತಿಳಿಸಿ ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಅಂತಾ ಹೇಳಿದರು.
ಹೊಲದ ಸರ್ವೇ ನಂಬರ್ 1 ರಿಂದ 350ರ ತನಕ ಹಾಜೀಸಾಬ್ ಇಂಚಗೇರಿ(7022187941), ಸರ್ವೇ ನಂಬರ್ 315 ರಿಂದ 740ರ ತನಕ ದಯಾನಂದ ಕಾಳೋಜಿ (8971335871), ಸರ್ವೇ ನಂಬರ್ 741 ರಿಂದ 1033ರ ತನಕ ಪರಶುರಾಮ ಕಟಕದೊಂಡ(9353856194) ಸಮೀಕ್ಷೆಗೆ ಇವರನ್ನು ಸಂಪರ್ಕಿಸಬೇಕು ಎಂದು ತಿಳಿಸಲಾಗಿದೆ.



