ಪ್ರಜಾಸ್ತ್ರ ಸುದ್ದಿ
ಚಡಚಣ(Chadachana): ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಹಲಸಂಗಿ ಕ್ರಾಸ್ ಹತ್ತಿರ ಯುವಕನನ್ನು ಕೊಲೆ ಮಾಡಲಾಗಿದೆ. ಝಳಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಕೃತ್ಯ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ನಡೆಸಿದ್ದಾರೆ.
ಬಾಬುಸಾಬ ಮಹಾದೇವ ಜಮಾದಾರ ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಕೌಟುಂಬಿಕ ಕಲಹದಿಂದ ಈ ಕೃತ್ಯವೆಸಗಲಾಗಿದೆ ಎಂದು ಹೇಳಲಾಗುತ್ತಿದೆ. ಜಗಳ ಮಾಡಿಕೊಂಡು ತವರು ಮನೆಗೆ ಬಂದಿದ್ದ ಪತ್ನಿಯನ್ನು ಕರೆದುಕೊಂಡು ಹೋಗಲು ಸೋಲಾಪುರದಿಂದ ಸ್ನೇಹಿತ ಅಪ್ಪಾಲಾಲ ಮಕಾಸಿಯೊಂದಿಗೆ ಹಲಸಂಗಿಗೆ ಬಂದಿದ್ದ. ಈ ವೇಳೆ ಗಲಾಟೆಯಾಗಿದೆ. ಮೃತ ಬಾಬುಸಾಬನ ಪತ್ನಿ ಸೌಂದರ್ಯಳ ತಾಯಿ ಮೀನಾಕ್ಷಿ, ಸಹೋದರ ವಿಕಾಸ ಹಾಗೂ ರಫೀಕ್ ಎಂಬುವರಿಂದ ಹಲ್ಲೆ ಮಾಡಲಾಗಿದೆ. ಇದರಿಂದ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.
ಈ ಘಟನೆಯಲ್ಲಿ ಮೃತನ ಸ್ನೇಹಿತ ಅಪ್ಪಾಲಾಲ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲೆಯಾದ ಬಾಬುಸಾಬ ಜಮಾದಾರ ತನ್ನ ಸಹೋದರಿ ಮೀನಾಕ್ಷಿ ಮಗಳನ್ನು ಕಳೆದು ಐದು ವರ್ಷಗಳ ಹಿಂದೆ ಮದುವೆಯಾಗಿದ್ದಾನೆ. ಆದರೆ, ಕೌಟುಂಬಿಕ ಕಲಹದಿಂದಾಗಿ ಪತ್ನಿ ಸೌಂದರ್ಯ ಕಳೆದ ಐದು ತಿಂಗಳಿನಿಂದ ಗಂಡನ ಮನೆ ಬಿಟ್ಟು ತವರು ಮನೆಯಲ್ಲಿದ್ದಳಂತೆ. ಆಕೆಯನ್ನು ಕರೆದುಕೊಂಡು ಹೋಗಲು ಶನಿವಾರ ಹಲಸಂಗಿಗೆ ಬಂದಿದ್ದಾಗ ಸಂಜೆ ಇಂತಹದೊಂದು ಅನಾಹುತ ನಡೆದಿದೆ. ಝಳಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.



