ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜರನ್ನು ಒಂದು ವೇಳೆ ಬಂಧಿಸಿದರೆ ನಾವು ಕೈ ಕಟ್ಟಿಕೊಂಡು ಕುಳಿತುಕೊಳ್ಳುವುದಿಲ್ಲ. ತೀವ್ರವಾದ ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಬುಧವಾರ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಯುವ ಮೋರ್ಚಾ ಬೆಳ್ತಂಗಡಿ ಮಂಡಲ ಅಧ್ಯಕ್ಷ ಶಶಿರಾಜ್ ಹೆಸರನ್ನು ಎಫ್ಐಆರ್ ನಲ್ಲಿ ಇರುವುದನ್ನು ಪ್ರಶ್ನಿಸಿದ್ದಾರೆ. ಪೊಲೀಸ್ ಠಾಣೆಗೆ ಹೋಗಿ ಉದ್ವೇಗದಿಂದ ಮಾತನಾಡಿರುವುದು ಸತ್ಯ. ಹಾಗಂತ ಪೊಲೀಸರು ದಬ್ಬಾಳಿಕೆ ಮಾಡಿದರೆ ಸಹಿಸಲ್ಲ.
ನೀತಿ ಸಂಹಿತೆ ನೆಪದಲ್ಲಿ ಶಾಸಕರನ್ನ, ಕಾರ್ಯಕರ್ತರನ್ನು ಬಂಧಿಸಿದರೆ ಹೋರಾಟ ಮಾಡುತ್ತೇವೆ. ಮುಂದಿನ ಬೆಳವಣಿಗೆಗೆ ಸರ್ಕಾರ ಹೊಣೆಯಾಗುತ್ತದೆ. ಗೃಹ ಸಚಿವರು ಪೊಲೀಸರೊಂದಿಗೆ ಮಾತನಾಡಿ ದಬ್ಬಾಳಿಕೆ ನಿಲ್ಲಿಸಬೇಕು ಎಂದಿದ್ದಾರೆ.
ಪೊಲೀಸರ ಕಾಲರ್ ಹಿಡಿಯಲು ಸಹ ಸಿದ್ಧ ಕೆಜಿ ಹಳ್ಳಿ ಡಿಜೆ ಹಳ್ಳಿ ಘಟನೆಯಂತೆ ಪೊಲೀಸ್ ಠಾಣೆ ಮಾಡಲಾಗುತ್ತೆ ಎಂದು ಬೆದರಿಕೆ ಹಾಕಲಾಗಿದೆ. ಅವಾಚ್ಯ ಶಬ್ಧಗಳಿಂದ ಪೊಲೀಸರನ್ನು ಬೈಯಲಾಗಿದೆ ಎಂದು ಶಾಸಕ ಹರೀಶ್ ಪೂಂಜ ವಿರುದ್ಧದ ಎಫ್ಐಆರ್ ನಲ್ಲಿ ದಾಖಲಿಸಲಾಗಿದೆ. ಇದೀಗ ಅವರ ಮನೆಗೆ ಪೊಲೀಸರು ತೆರಳಿದ್ದಾರೆ.