ಪ್ರಜಾಸ್ತ್ರ ಡೆಸ್ಕ್
ಬೆಂಗಳೂರು: ರಾಜ್ಯದಲ್ಲಿ ಕಳೆದ ನಾಲ್ಕು ದಿನಗಳಿಂದ ಸಾರಿಗೆ ಸಿಬ್ಬಂದಿ ಮುಷ್ಕರ ನಡೆಸ್ತಿದ್ದಾರೆ. ಇದರ ಸಂಪೂರ್ಣ ಎಫೆಕ್ಟ್ ಸಾರ್ವಜನಿಕರ ಮೇಲೆ ಬಿದ್ದಿದೆ. ಯಾವೊಬ್ಬ ರಾಜಕಾರಣಿಯ ಮೇಲೂ ಇದರ ಪರಿಣಾಮ ಆಗಿಲ್ಲ. ಹೀಗಾಗಿಯೇ ಇದರ ಬಗ್ಗೆ ಗಂಭೀರವಾದ ಚರ್ಚೆ ಆಗಲಿ, ತೀರ್ಮಾನವಾಗಲಿ ತೆಗೆದುಕೊಳ್ಳಲು ಆಗ್ತಿಲ್ಲ.
ರಾಜ್ಯದಲ್ಲಿ 1 ಲೋಕಸಭಾ ಹಾಗೂ 2 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ಮುಖ್ಯಮಂತ್ರಿ, ಸಚಿವರು, ಶಾಸಕರು ಹಾಗೂ ವಿಪಕ್ಷ ನಾಯಕರು ಸೇರಿದಂತೆ ಎಲ್ಲ ರಾಜಕಾರಣಿಗಳು ಅದರಲ್ಲಿ ಮುಳುಗಿದ್ದಾರೆ. ಮೂರು ಕ್ಷೇತ್ರಗಳನ್ನ ವಶ ಪಡಿಸಿಕೊಳ್ಳಲು ತೋರಿಸ್ತಿರುವ ಆಸಕ್ತಿ ಹಾಗೂ ಮಾಡ್ತಿರುವ ಕೆಲಸ ಸಾರಿಗೆ ಸಮಸ್ಯೆ ಬಗ್ಗೆ ಯಾಕಿಲ್ಲವೆಂದು ಜನ ಕೇಳ್ತಿದ್ದಾರೆ.
ಸರ್ಕಾರ ಸಿಬ್ಬಂದಿ ಮನವೊಲಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಆದ್ರೆ, ವಿರೋಧ ಪಕ್ಷದ ನಾಯಕರು ಏನು ಮಾಡ್ತಿದ್ದಾರೆ? ಇದಕ್ಕೆ ಜವಾಬ್ದಾರರು ಯಾರಾಗಿದ್ದಾರೆ ಅವರನ್ನ ಗಟ್ಟಿ ಧ್ವನಿಯಲ್ಲಿ ಪ್ರಶ್ನಿಸುವುದು ಬಿಟ್ಟು ಕಾಟಾಚಾರಕ್ಕೆ ಎಂಬಂತೆ ಒಂದೊಂದು ಹೇಳಿಕೆ ಕೊಟ್ಟು ಕೈತೊಳೆದುಕೊಳ್ತಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಅಸ್ಥಿರತೆ ಕಾಡುತ್ತಿದೆ. ಇದು ಹೀಗೆ ಮುಂದುವರೆದ್ರೆ ಕೋವಿಡ್ ನಿಂದ ಬಸವಳೆದಿರುವ ನಾಡಿನ ಜನತೆ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವುದರಲ್ಲಿ ಅನುಮಾನವೇ ಇಲ್ಲ.