ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರೋನಾ ಭೀಕರ ಸಂದರ್ಭದಲ್ಲಿ ಸಾರಿಗೆ ನೌಕರರು ಮುಷ್ಕರ ಮಾಡುವುದು ಸರಿಯಿಲ್ಲ. ಮುಷ್ಕರ ಬಿಟ್ಟು ಕರ್ತವ್ಯಕ್ಕೆ ಹಾಜರಾಗಿ ಅನ್ನೋ ಹೈಕೋರ್ಟ್ ಸೂಚನೆಯ ಹಿನ್ನೆಲೆಯಲ್ಲಿ ಬುಧವಾರದಿಂದ ಬಸ್ ಸಂಚಾರ ಬಹುತೇಕ ಶುರುವಾಗಿದೆ.
ನೈರುತ್ಯ, ಈಶಾನ್ಯ, ಆಗ್ನೇಯ ವಲಯ ಸೇರಿದಂತೆ ಕೆಎಸ್ಆರ್ ಟಿಸಿ, ಬಿಎಂಟಿಸಿ ಬಸ್ ಗಳ ಸಂಚಾರ ಕಂಡು ಬಂದಿದೆ. ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ, ರಾಯಚೂರು, ಮಂಗಳೂರು ವಿಭಾಗ ಸೇರಿದಂತೆ ರಾಜ್ಯಾದ್ಯಂತ ಬಹುತೇಕ ಬಸ್ ಸಂಚಾರ ಶುರುವಾಗಿದೆ. ನಾಳೆಯೊಳಗೆ ಬಹುತೇಕ ಬಸ್ ಸಂಚಾರ ಶುರುವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಕನ್ನಡ 185, ಬಾಗಲಕೋಟೆ 304, ಹುಬ್ಬಳ್ಳಿ-ಧಾರವಾಡ ನಗರ 143, ಗ್ರಾಮಾಂತರ 165, ಗದಗ 251, ಧಾರವಾಡ 99, ಚಿಕ್ಕೋಡಿ 180, ಬೆಳಗಾವಿ 141, ಹಾವೇರಿ 192 ಬಸ್ ಗಳು ಸಂಚಾರ ಶುರು ಮಾಡಿವೆ. ಈ ಮೂಲಕ ಕಳೆದ ಎರಡು ವಾರಗಳಿಂದ ನಡೆಯುತ್ತಿರುವ ಮುಷ್ಕರ ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದೆ.