ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ ಸಂಬಂಧ ಕೇಂದ್ರಕ್ಕೆ ಸಪ್ರೀಂ ಕೋರ್ಟ್ ಛೀಮಾರಿ ಹಾಕಿಲ್ಲ. ಯಾವುದೇ ನಿರ್ದೇಶನ ನೀಡಿಲ್ಲ. ಸರ್ಕಾರವೇ ಚುನಾವಣೆ ಆಯೋಗದ ಒಪ್ಪಿಗೆ ಕೇಳಿದ್ದು, ಅನುಮತಿ ನೀಡಿದೆ. ಇದನ್ನೇ ಕೋರ್ಟ್ ಮುಂದೆ ತಿಳಿಸಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೂಗಳ ಹತ್ಯೆ, ಹಲ್ಲೆಗಳು ನಡೆಯುತ್ತಿವೆ. ಹೀಗಾಗಿ ಜನರ ದಿಕ್ಕು ತಪ್ಪಿಸಲು ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ. ತಮಗೆ ಸಿಕ್ಕ ಜಯ ಎಂದು ಬಿಂಬಿಸುತ್ತಿದೆ. ಎಸ್ ಡಿಆರ್ ಎಫ್ ಅಡಿಯಲ್ಲಿ 700 ಕೋಟಿ ನೀಡಿದೆ. ಇದೇ ಹಣದಲ್ಲಿ 2 ಸಾವಿರ ರೂಪಾಯಿ ಪರಿಹಾರ ನೀಡುತ್ತಿದೆ. 700 ಕೋಟಿಯಲ್ಲಿ ರಾಜ್ಯ ಸರ್ಕಾರ ಶೇ.25ರಷ್ಟು ಹಣ ನೀಡಬೇಕು.
ಗ್ಯಾರಂಟಿಗಳಿಂದ ಎಲ್ಲರಿಗೂ ಪ್ರಯೋಜನ ಸಿಗುತ್ತಿಲ್ಲ. ತೆರಿಗೆ ಸಂಗ್ರಹ ಆಗುತ್ತಿಲ್ಲ. ಅಭಿವೃದ್ಧಿಗೆ ಹಣವಿಲ್ಲ. ಚುನಾವಣೆ ಮುಗಿದ ಬಳಿಕ ನೌಕರರಿಗೆ ಸಂಬಳ ನೀಡಲು ಹಣ ಇರುವುದಿಲ್ಲ. ಈಗ ಚುನಾವಣೆ ಸಮಯದಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಕೊಟ್ಟವರು ಯಾರು? ಇದು ನೀತಿ ಸಂಹಿತೆ ಉಲ್ಲಂಘನೆ. ಈ ಬಗ್ಗೆ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸುತ್ತೇವೆ ಎಂದರು.