ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ದಿನಕೊಂದು ತಿರುವು ಪಡೆದುಕೊಳ್ಳುತ್ತಿದೆ. ಬೇಲಿನೆ ಎದ್ದು ಹೊಲ ಮೇಯ್ದಂತೆ ಪೊಲೀಸರು ಇದರಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ರಾಜಕಾರಣಿಗಳು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದು, ಸಿಎಂ ಹಾಗೂ ಮಾಜಿ ಸಿಎಂ ಮಾತುಗಳು ಇಲ್ಲಿವೆ.
ಪಿಎಸ್ಐ ನೇಮಕಾತಿ ಪ್ರಕರಣದಲ್ಲಿ ಕಾಂಗ್ರೆಸ್ ನವರು ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಆರೋಪ ಮಾಡಿದ್ದು ತಮ್ಮ ಪಕ್ಷದವರು ಬಣ್ಣ ಬಯಲಾಗಿದೆ ಅನ್ನೋ ಕಾರಣಕ್ಕೆ ಕಾಂಗ್ರೆಸ್ ಹಿಟ್ ಅಂಡ್ ರನ್ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.
ಬಂಧಿತರಲ್ಲಿ ಕೆಲವರು ಅವರ ಪಕ್ಷದವರು ಇದ್ದಾರೆ. ಅವರಿಂದ ಬಣ್ಣ ಬಯಲಾಗುತ್ತಿದೆ. ಹೀಗಾಗಿ ಆರೋಪ ಮಾಡುತ್ತಿದ್ದಾರೆ. ಅವರ ಆರೋಪಕ್ಕೆ ಸಾಕ್ಷಿ ಇಲ್ಲ. ಜನ ಒಪ್ಪುವುದಿಲ್ಲವೆಂದು ಹೇಳಿದ್ದಾರೆ.
ಪಿಎಸ್ಐ ನೇಮಕಾತಿ ಪ್ರಕರಣ ಹೈಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ನ್ಯಾಯಾಂಗ ತನಿಖೆಯಾಗಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದು 300 ಕೋಟಿಗಳ ಹಗರಣವಾಗಿದೆ. ಸಿಐಡಿ ತನಿಖೆಯಲ್ಲಿ ನಂಬಿಕೆ ಇಲ್ಲ. ನ್ಯಾಯಾಂಗ ತನಿಖೆಯಾಗಬೇಕು. ಹಗರಣಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಸರ್ಕಾರವೇ ಹೊಣೆಯಾಗಿದೆ ಎಂದಿದ್ದಾರೆ.
ಈ ಪ್ರಕರಣವನ್ನು 15 ದಿನಗಳಲ್ಲಿ ಗುಂಡಿ ತೋಡಿ ಮುಚ್ಚಿ ಹಾಕಲಾಗುತ್ತೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಡ್ರಗ್ಸ್ ಕೇಸ್, ಲಾಟರಿ ಕೇಸ್ ಏನಾದವು? ಯಾವುದು ತಾರ್ತಿಕ ಅಂತ್ಯ ಕಂಡಿದೆ? ಪಿಎಸ್ಐ ನೇಮಕಾತಿ ಪ್ರಕರಣವೂ ಇದೆ ರೀತಿಯಾಗುತ್ತೆ ಎಂದರು.
ಸರ್ಕಾರದ ಮೌನ ನೋಡಿದ ಮೌನಂ ಸಮ್ಮತಿ ಲಕ್ಷಣಂ ಎನ್ನುವಂತಿದೆ. ಸಚಿವ ಅಶ್ವಥ್ ನಾರಾಯಣ್ ಬಗ್ಗೆ ಮೃದು ಧೋರಣೆ ಇಲ್ಲ. ದಾಖಲೆ ಸಮೇತ ಆರೋಪಿಸಬೇಕು ಎಂದಿದ್ದಾನೆ ಅಂತಾ ಹೇಳಿದರು.