ಪ್ರಜಾಸ್ತ್ರ ಸುದ್ದಿ
ನವದೆಹಲಿ: ಕೇಂದ್ರದಿಂದ ಬರಬೇಕಾದ ತೆರಿಗೆ ಹಂಚಿಕೆ ವಿಚಾರದಲ್ಲಿ ಅನ್ಯಾಯ ಮಾಡಲಾಗುತ್ತಿದೆ ಎಂದು ಕರ್ನಾಟಕ ಕಾಂಗ್ರೆಸ್ ಸರ್ಕಾರ ರಾಷ್ಟ್ರ ರಾಜಧಾನಿಯಲ್ಲಿ ‘ನನ್ನ ತೆರಿಗೆ ನನ್ನ ಹಕ್ಕು’ ಘೋಷವಾಕ್ಯದ ಅಡಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಿತು. ಜಂತರ್ ಮಂತರ್ನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಸಚಿವರು, ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರ ಕೂಡಿಕೊಂಡು ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಸರ್ಕಾರದ ಅನ್ಯಾಯದಿಂದಾಗಿ 2017-18ರಲ್ಲಿ ಕರ್ನಾಟಕ್ಕೆ 1,87,867 ಕೋಟಿ ನಷ್ಟವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಇದರಿಂದಾಗಿ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ರಾಜ್ಯದ ಜನರ ಹಿತಕ್ಕಾಗಿ ನ್ಯಾಯಯುತವಾಗಿ ತೆರಿಗೆ ಪಾಲು ಕೇಳುತ್ತಿದ್ದೇವೆ ಎಂದರು. ಅನುದಾನ ಹಂಚಿಕೆಯಲ್ಲಿ ಅಸಹಾಯಕತೆ ತೋರಿಸುವ ಸರ್ಕಾರ ಯಾಕೆ ಇರಬೇಕು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಚಾಟಿ ಬೀಸಿದರು.
ಕಾಂಗ್ರೆಸ್ ಸರ್ಕಾರದ ಪ್ರತಿಭಟನೆ ಕುರಿತು ಸಂಸತ್ನಲ್ಲಿ ಮಾತನಾಡಿದ ಪ್ರಧಾನಿ, ಉತ್ತರ, ದಕ್ಷಿಣ ಎಂದು ವಿಭಜಿಸುವಂತಹ ಕೆಲಸವನ್ನು ನಿಲ್ಲಿಸಿ. ಜಾಹೀರಾತು ನೀಡುವ ಮೂಲಕ ಉತ್ತರ, ದಕ್ಷಿಣ ಎಂದು ಬಿಂಬಿಸುತ್ತಿದೆ ಅಂತಾ ತಿರುಗೇಟು ನೀಡಿದರು.